ಬೆಂಗಳೂರು: ರೈಲು ಹಳಿ ಸಮೀಪದಲ್ಲಿ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ವೇಳೆ ಮೆಮೂ ರೈಲು ಡಿಕ್ಕಿ ಹೊಡೆದು ಒಬ್ಬ ಮೃತಪಟ್ಟ ಘಟನೆ ವೈಟ್ಫೀಲ್ಡ್ ಕಾವೇರಿ ನಗರದ ಬಳಿ ನಡೆದಿದೆ.
ಬಿಹಾರದ ಮಹೇಶ್ ದಾಸ್ (35) ಮೃತ ವ್ಯಕ್ತಿ. ಪೇಟಿಂಗ್ ಕೆಲಸ ಮಾಡುತ್ತಿದ್ದ ಮಹೇಶ್ ದಾಸ್, ಶುಕ್ರವಾರ ರಾತ್ರಿ ಹೂಡಿ ಸರ್ಕಲ್ಗೆ ಸ್ನೇಹಿತರ ಜತೆ ಬಂದು ಊಟ ಮಾಡಿದ್ದಾರೆ.
ರಾತ್ರಿ 9.30ರ ಸುಮಾರಿಗೆ ಸ್ನೇಹಿತರ ಜತೆ ಕಾವೇರಿ ನಗರದ ಮನೆಗೆ ವಾಪಸು ಹೋಗಲು, ಹತ್ತಿರ ದಾರಿ ಎಂಬ ಕಾರಣಕ್ಕೆ ರೈಲ್ವೆ ಹಳಿ ಸಮೀಪ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರೈಲು ಡಿಕ್ಕಿ ಹೊಡೆದ ಪರಿಣಾಮ ಮಹೇಶ್ ದಾಸ್ ಸುಮಾರು 15 ಅಡಿ ದೂರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ ಎಂದು ರೈಲ್ವೆ ಪೊಲೀಸರು ತಿಳಿಸಿದರು. ದಂಡು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.