ಮಹದೇವಪುರ: ಕ್ಷೇತ್ರದ ಬಿದರಹಳ್ಳಿ ಹೋಬಳಿಯ ರಾಂಪುರ ಕೆರೆ ದಂಡೆಗೆ ಇತ್ತೀಚಿನ ದಿನಗಳಲ್ಲಿ ಬಿಬಿಎಂಪಿ ಲಾರಿಗಳು ಕಸವನ್ನು ಸುರಿದು ಹೋಗುತ್ತಿವೆ. ಇದರಿಂದಾಗಿ ಕಸದ ರಾಶಿ ಕೆರೆಯ ತುಂಬಾ ತುಂಬಿಕೊಂಡಿದೆ.
‘ಕಸದ ರಾಶಿ ತುಂಬಿರುವುದರಿಂದ ನಾಯಿಗಳು ಬೀಡು ಬಿಟ್ಟಿವೆ. ಕಸದ ದುರ್ವಾಸನೆಯೊಂದಿಗೆ ನಾಯಿಗಳ ಕಾಟ ಅತಿಯಾಗಿದೆ’ ಎಂದು ಸ್ಥಳೀಯ ನಿವಾಸಿ ಶಾಂತಮ್ಮ ದೂರಿದರು.
‘ಈ ಬಗ್ಗೆ ಸಂಬಂಧಪಟ್ಟವರಿಗೆ ಅನೇಕ ಸಲ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕಸದ ರಾಶಿ ಹೆಚ್ಚುತ್ತಲೇ ಇದೆ’ ಎಂದರು.
‘ಜಲಕಾಯವನ್ನು ಅಭಿವೃದ್ಧಿಪಡಿಸುವುದಾಗಿ ಸ್ಥಳೀಯ ಶಾಸಕರು ಕಳೆದ ವರ್ಷ ಗುದ್ದಲಿ ಪೂಜೆ ನೆರವೇರಿಸಿದ್ದರು. ಆದರೆ, ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯ ಆರಂಭಗೊಂಡಿಲ್ಲ’ ಎಂದು ಸ್ಥಳೀಯರು ದೂರಿದರು.
‘ಕಸ ಸುರಿಯುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಸದ್ಯ ಬಿಬಿಎಂಪಿ ಲಾರಿಗಳು ಕೆರೆ ಬಳಿಗೆ ಬರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ದೊಡ್ಡಗುಬ್ಬಿ ಪಂಚಾಯಿತಿ ಕಾರ್ಯದರ್ಶಿ ರಾಜೇಂದ್ರಬಾಬು ‘ಪ್ರಜಾವಾಣಿ’ಗೆ ತಿಳಿಸಿದರು.