ಬೆಂಗಳೂರು: ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರ ಕಾರಿನ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದಿದ್ದು, ಕಾರು ಭಾಗಶಃ ಜಖಂಗೊಂಡಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.
‘ಡಿಸಿಪಿ ಕಚೇರಿ ಆವರಣದಲ್ಲಿ ಮರವಿದೆ. ಮಳೆ, ಗಾಳಿಯಿಂದಾಗಿ ಮರದ ಕೊಂಬೆ ಸಡಿಲಗೊಂಡಿತ್ತು. ಅದೇ ಕೊಂಬೆ ಏಕಾಏಕಿ ಮುರಿದು ಬಿದ್ದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಶನಿವಾರ ಕಚೇರಿಗೆ ಡಿಸಿಪಿ ಅವರನ್ನು ಕರೆತಂದಿದ್ದ ಚಾಲಕ, ಡಿಸಿಪಿ ಕಚೇರಿಗೆ ತೆರಳಿದ ಬಳಿಕ ಕಾರಿನಲ್ಲಿ ಕುಳಿತಿದ್ದರು. ಮೊಬೈಲ್ ಕರೆ ಬಂದಿದ್ದು, ಇಳಿದು ಮಾತನಾಡುತ್ತ ಬೇರೆಡೆ ತೆರಳಿದ್ದರು. ಆಗ ಕೊಂಬೆ ಬಿದ್ದಿದೆ’ ಎಂದೂ ತಿಳಿಸಿವೆ.