ಬೆಂಗಳೂರು: ನಗರದಲ್ಲಿ ಶನಿವಾರ ರಾತ್ರಿ ಪ್ರತ್ಯೇಕ ಪ್ರಕರಣಗಳಲ್ಲಿ ಜಿಮ್ ತರಬೇತುದಾರ ಸೇರಿ ಇಬ್ಬರನ್ನು ಕೊಲೆ ಮಾಡಲಾಗಿದೆ.
ಅನ್ನಪೂರ್ಣೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ಮಣಿ ಅಲಿಯಾಸ್ ಸುಬ್ರಮಣಿ (30) ಎಂಬುವರನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಲಾಗಿದೆ.
‘ಐಟಿಐ ಲೇಔಟ್ ನಿವಾಸಿಯಾಗಿದ್ದ ಸುಬ್ರಮಣಿ, ಚಂದ್ರಾ ಲೇಔಟ್ನಲ್ಲಿ ತಮ್ಮದೇ ಜಿಮ್ ತೆರೆದಿದ್ದರು. ಶನಿವಾರ ರಾತ್ರಿ ಮನೆಗೆ ಹೊರಟಿದ್ದ ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳ ತಂಡ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿಕೊಂದಿದೆ’ ಎಂದು ಪೊಲೀಸರು ಹೇಳಿದರು.
ಪಾದಚಾರಿ ಕೊಲೆ: ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಳೇ ಗುಡ್ಡದಹಳ್ಳಿ ನಿವಾಸಿ ರಾಜಕುಮಾರ್ (40) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
‘ರಾಜಸ್ಥಾನದ ರಾಜಕುಮಾರ್, ಹಾರ್ಡ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಹೊರಟಿದ್ದಾಗ ಮಾರ್ಗಮಧ್ಯೆಯೇ ಜಗಳ ತೆಗೆದಿದ್ದ ಅಪರಿಚಿತರು, ಕೊಲೆ ಮಾಡಿ ಪರಾರಿಯಾಗಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.