ಬೆಂಗಳೂರು: ಇಬ್ಬರ ಕೊಲೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿ ಮಜರ್ಖಾನ್ ಅಲಿಯಾಸ್ ಭಟ್ಟಿ ಮಜರ್ (38) ಸೇರಿದಂತೆ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
‘ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯ ಮೋದಿ ಗಾರ್ಡನ್ ಬಳಿ ಮಾರಕಾಸ್ತ್ರ ಹಿಡಿದುಕೊಂಡು ನಿಂತಿದ್ದ ಆರೋಪಿಗಳು, ದರೋಡೆ ಹಾಗೂ ಕೊಲೆಗೆ ಹೊಂಚು ಹಾಕಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಯಿತು’ ಎಂದು ಪೊಲೀಸರು ಹೇಳಿದರು.
‘ಕೊಲೆ, ಕೊಲೆ ಯತ್ನ, ದರೋಡೆ ಹಾಗೂ ಕಳ್ಳಭಟ್ಟಿ ಮಾರಾಟ ಪ್ರಕರಣದ ಆರೋಪಿಯಾಗಿದ್ದ ಭಟ್ಟಿ ಮಜರ್ ಹೆಸರು, ಡಿ.ಜೆ.ಹಳ್ಳಿ ಠಾಣೆ ರೌಡಿ ಪಟ್ಟಿಯಲ್ಲಿದೆ’ ಎಂದೂ ತಿಳಿಸಿದರು
‘ಭಟ್ಟಿ ಮಜರ್ ಹಾಗೂ ಆತನ ಸಹಚರರಾದ ಯೋಗೇಶ್, ರಿಜ್ವಾನ್, ಸುಮಿತ್ ಹಾಗೂ ಪುನೀತ್ ಗ್ಯಾಂಗ್ ಕಟ್ಟಿಕೊಂಡು ಕೃತ್ಯ ಎಸಗುತ್ತಿದ್ದರು. ಹಳೇ ದ್ವೇಷದಿಂದಾಗಿ ಎದುರಾಳಿ ಗುಂಪಿನ ಇಬ್ಬರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದರು.