ಬೆಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಯಲ್ಲಿ ಸುಲಿಗೆಗೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಗಳು, ಬೆಂಗಳೂರಿನ ಜಯನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
‘ಮಂಗಳೂರಿನ ಮೊಹಮ್ಮದ್ ರಫೀಕ್ ಹಾಗೂ ಬೆಂಗಳೂರು ಶಿವಾಜಿ ನಗರದ ಮೊಹಮ್ಮದ್ ಅನೀಸ್ ಬಂಧಿತರು. ನಗರದಲ್ಲಿ ನಡೆದಿದ್ದ ಸರ ಗಳವು ಪ್ರಕರಣದಲ್ಲಿ ಇವರಿಬ್ಬರ ನ್ನು ಬಂಧಿಸಲಾಗಿದೆ. ಬೈಂದೂರಿನಲ್ಲಿ ಸುಲಿಗೆಗೆ ಯತ್ನಿಸಿದ್ದ ಸಂಗತಿಯನ್ನು ಆರೋಪಿಗಳು ಬಾಯಿ ಬಿಟ್ಟಿದ್ದಾರೆ’ ಎಂದು ಜಯನಗರ ಪೊಲೀಸರು ಹೇಳಿದರು. ‘ಪಟ್ಟಾಭಿರಾಮನಗರದ 13ನೇ ಅಡ್ಡರಸ್ತೆಯಲ್ಲಿ ಮಹಿಳೆಯೊಬ್ಬರನ್ನು ಹಿಂಬಾಲಿಸಿದ್ದ ಆರೋಪಿಗಳು, ವಿಳಾಸ ಕೇಳುವ ನೆಪದಲ್ಲಿ ಚಿನ್ನದ ಸರ ಕಿತ್ತೊಯ್ದಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು’ ಎಂದು ತಿಳಿಸಿದರು.
‘ಬೆಂಗಳೂರಿನ ಜೆ.ಪಿ.ನಗರ, ಎಚ್ಎಸ್ಆರ್ ಲೇಔಟ್, ಶಂಕರಪುರ, ಬಸವನಗುಡಿ, ಬನ್ನೇರುಘಟ್ಟ, ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಆರೋಪಿಗಳು ಅಪರಾಧ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಇವರ ಸಹಚರರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ತನಿಖೆ ಮುಂದುವರಿಸಲಾಗಿದೆ’ ಎಂದರು.
ಜೈಲಿನಿಂದ ಪರಾರಿಯಾಗಿದ್ದ ಆರೋಪಿ: ‘ಬಂಧಿತ ಆರೋಪಿ ಮೊಹಮ್ಮದ್ ರಫೀಕ್ ಅಪರಾಧ ಹಿನ್ನೆಲೆಯುಳ್ಳವ. ಪ್ರಕರಣವೊಂದರಲ್ಲಿ ಜೈಲು ಸೇರಿದ್ದ ಈತ, ಅಲ್ಲಿಂದ ಪರಾರಿಯಾಗಿದ್ದ. ಈ ಸಂಬಂಧ ಪ್ರತ್ಯೇಕ ಪ್ರಕರಣವೂ ದಾಖಲಾಗಿತ್ತು’ ಎಂದು ಪೊಲೀಸರು ತಿಳಿಸಿದರು.
‘ಸಹಚರರ ಜೊತೆ ಕೆಲ ದಿನಗಳ ಹಿಂದೆಯಷ್ಟೇ ಬೈಂದೂರಿಗೆ ಹೋಗಿದ್ದ ರಫೀಕ್, ಅಲ್ಲಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಗೆ ನುಗ್ಗಿದ್ದ. ಸಿಬ್ಬಂದಿಯನ್ನು ಬೆದರಿಸಿ ಸುಲಿಗೆಗೆ ಯತ್ನಿಸಿದ್ದ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಂತೆ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು’ ಎಂದು ಹೇಳಿದರು.