ಬೆಂಗಳೂರು: ‘ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಸಂತೃಪ್ತಿಯ ಭಾವನೆ ಮರೆಯಾಗುತ್ತಿದೆ. ಎಷ್ಟೇ ಹಣ, ಆಸ್ತಿ, ಸಂಪತ್ತು ಗಳಿಸಿದರೂ, ಮತ್ತಷ್ಟು ಬೇಕು ಎಂಬ ದುರಾಸೆ ಹೆಚ್ಚುತ್ತಿದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರ– ಬಳಕೆದಾರರ ಸಹಕಾರ ಸಂಘವು ಭಾನುವಾರ ಆಯೋಜಿಸಿದ್ದ ‘ಸರ್ವಸದಸ್ಯರ ಸಭೆ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಮ್ಮಲ್ಲಿರುವ ಸಂಪತ್ತಿನ ಬಗ್ಗೆ ಯಾರಿಗೂ ಸಂತೃಪ್ತಿ ಇಲ್ಲ. ಭ್ರಷ್ಟಾಚಾರ, ದರೋಡೆ, ಅವ್ಯವಹಾರ ಹೆಚ್ಚಲು ಇಂಥ ಮನೋಭಾವವೇ ಕಾರಣ. ಸಂಪತ್ತು ಹೆಚ್ಚಿದಂತೆ ದುರಾಸೆ ಹೆಮ್ಮರವಾಗಿ ಬೆಳೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಸಮಾಜ ಕಟ್ಟುವುದು ಕಷ್ಟಸಾಧ್ಯ’ ಎಂದರು.
ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.