ಬೆಂಗಳೂರು: ಉರ್ದು ಕವಿ, ನಿವೃತ್ತ ಐಎಫ್ಎಸ್ ಅಧಿಕಾರಿ ಸೈಯದ್ ಅಹ್ಮದ್ ಇಸಾರ್ (98) ಅವರು ಹೃದಯಾಘಾತದಿಂದ ನಗರದಲ್ಲಿ ಬುಧವಾರ ನಿಧನರಾದರು.
ನಗರದ ಮುನಿರೆಡ್ಡಿಪಾಳ್ಯದಲ್ಲಿ 1922ರಲ್ಲಿ ಅವರು ಜನಿಸಿದ್ದರು. ಶಾಲಾ ಹಂತದಲ್ಲಿಯೇ ಅವರು ಪರ್ಷಿಯನ್ ಭಾಷೆ ಅಧ್ಯಯನ ಮಾಡಿದ್ದರು. ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ಪೂರೈಸಿದ್ದ ಅವರು, 1956ರ ನಂತರ ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದರು.
‘ಇಸಾರ್’ ಕಾವ್ಯನಾಮದ ಮೂಲಕವೇಅವರು ಪ್ರಸಿದ್ಧರಾಗಿದ್ದರು. ಪರ್ಷಿಯನ್ ಕವಿಗಳಾದ ಮೌಲಾನಾ ಜಲಾಲುದ್ದೀನ್ ಮಹಮ್ಮದ್ ರೂಮಿ, ಡಾ. ಅಲ್ಲಮಾ ಇಕ್ಬಾಲ್, ಉಮರ್ ಖಯ್ಯಾಮ್, ಮೌಲಾನಾ ಸಾದ್ ಅವರ ಕವಿತೆಗಳನ್ನು ಉರ್ದುಗೆ ಭಾಷಾಂತರಿಸಿದ್ದರು. ಅಲ್ಲದೆ, ಅಸ್ರಾರ್–ಎ–ಖುದಿ, ರೂಬೂಝ್–ಎ–ಬೇಖುದಿ, ಜಾವೇದ್ ನಾಮ, ಝಬೂರೇ ಅಜ್ಮ್, ಅರ್ಮಘನ್–ಎ’ ಹಿಜಾಝ್ ಎಂಬ ಕೃತಿಗಳನ್ನು ರಚಿಸಿದ್ದರು. ‘ತರಾನ ಒ ತರಂಗ್’ ಅವರು ರಚಿಸಿದ ಕವನ ಸಂಕಲನ.
ಇದಾರಾ ಅದಬ್ ಎ ಇಸ್ಲಾಮಿ ಹಫೀಜ್ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಉರ್ದು ಅಕಾಡೆಮಿ, ಉತ್ತರಪ್ರದೇಶ ಹಾಗೂ ಮಹಾರಾಷ್ಟ್ರ ಉರ್ದು ಅಕಾಡೆಮಿ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.
ನಗರದ ಖುದ್ದೂಸ್ ಸಾಹೇಬ್ ಸ್ಮಶಾನದಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.