ಬೆಂಗಳೂರು:‘ನೂರು ಪುಟಗಳನ್ನು ಅಧ್ಯಯನ ಮಾಡಿದರೆ ಮಾತ್ರ ಒಂದು ಪುಟ ಬರೆಯಲು ಸಾಧ್ಯ. ಬರಹಗಾರರು ಹೆಚ್ಚು ಅಧ್ಯಯನಶೀಲರಾಗಬೇಕು’ ಎಂದು ಲೇಖಕ ಪ್ರೊ. ಎಂ. ಬಸವಣ್ಣ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರೊ. ವಿ.ಕೃ. ಗೋಕಾಕ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಆಸಕ್ತಿಯಿಂದ ಬರೆಯುವ ಬರಹ ಜನರನ್ನು ಬೇಗ ತಲುಪುತ್ತದೆ’ ಎಂದು ತಿಳಿಸಿದರು.
ಅರ್ಥಶಾಸ್ತ್ರಜ್ಞ ಡಾ. ವಿ.ಆರ್. ಪಂಚಮುಖಿ, ‘ಪ್ರತಿಯೊಬ್ಬರೂ ಶ್ರದ್ಧೆ ಮತ್ತು ನಿಷ್ಠೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ’ ಎಂದರು.
‘ಯಾವುದೇ ಕ್ಷೇತ್ರವಿರಲಿ, ನಮ್ಮತನವನ್ನು ನಾವು ಮರೆಯಬಾರದು. ಸ್ವಂತಿಕೆಗೆ ಬೆಲೆ ಕೊಟ್ಟರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ವಿ.ಕೃ. ಗೋಕಾಕ್ ವಾಙ್ಮಯ ಟ್ರಸ್ಟ್ ವತಿಯಿಂದ ಈ ಪ್ರಶಸ್ತಿ ನೀಡಲಾಯಿತು. ಟ್ರಸ್ಟ್ನ ಅಧ್ಯಕ್ಷ ವೈ.ಎನ್. ಗಂಗಾಧರ್ ಸೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.