ಬೆಂಗಳೂರು:ಮಾಧ್ಯಮಗಳಿಗೆ ಸಾಮಾಜಿಕ ಬದ್ಧತೆ ಇರಬೇಕು. ಅಂತಹ ಮೌಲ್ಯಾಧಾರಿತ ಬದ್ಧತೆಯನ್ನು ’ಪ್ರಜಾವಾಣಿ’ ಸದಾ ಪಾಲಿಸಿಕೊಂಡು ಬಂದಿರುವುದು ಜಿ.ಎನ್. ರಂಗನಾಥ ರಾವ್ ಅವರ ಕೃತಿಯಲ್ಲೂ ಪ್ರತಿಫಲಿಸಿದೆ ಎಂದು ವಿಮರ್ಶಕ ಸಿ.ಎನ್.ರಾಮಚಂದ್ರನ್ ಬಣ್ಣಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬಹುರೂಪಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಜಿ.ಎನ್. ರಂಗನಾಥ ರಾವ್ ಅವರಮಾಧ್ಯಮ ಲೋಕದ ಪಯಣದ ಕಥನ 'ಆ ಪತ್ರಿಕೋದ್ಯಮ' ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಸನ್ನಿವೇಶ ಮಾಧ್ಯಮಗಳಿಗೆ ಸವಾಲಾಗಿದೆ. ಜಾಹೀರಾತು ಇಲ್ಲದೇ ಪತ್ರಿಕೆ ನಡೆಸಲು ಸಾಧ್ಯವಿಲ್ಲ ಎನ್ನುವ ಸನ್ನಿವೇಶ ಸೃಷ್ಟಿಯಾಗಿದೆ. ಪತ್ರಕರ್ತರೂ ಹಲವು ಒತ್ತಡಗಳನ್ನು ಅನುಭವಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಧ್ಯಮಗಳು ವೃತ್ತಿನಿಷ್ಠೆ ಮೆರೆಯಬೇಕಾದ ಅಗತ್ಯ ಇದೆ.ಆಳುವ ವರ್ಗದ ಓಲೈಕೆ ಮಾಡದೆ, ಕಾರ್ಪೊರೇಟ್ ಸಂಸ್ಥೆಗಳ ಬೆನ್ನು ಬೀಳದೆ, ಪ್ರಕಟಿಸುವ ಅಗತ್ಯ ಹಿಂದಿಗಿಂತಲೂ ಈಗ ಹೆಚ್ಚಿದೆ ಎಂದು ಪ್ರತಿಪಾದಿಸಿದರು.
ಸಾಹಿತಿ ಎಚ್.ಎನ್.ಆರತಿ, ಹಿಂದಿನ, ಈಗಿನ ಪತ್ರಿಕೋದ್ಯಮದ ಮಧ್ಯೆ ದೊಡ್ಡ ಕಂದರವಿದೆ. ಪತ್ರಿಕೋದ್ಯಮದ ಆದ್ಯತೆಗಳು ಬದಲಾಗಿವೆ. ತಂತ್ರಜ್ಞಾನದ ಫಲವಾಗಿ ಸಮಾಜಮುಖಿ ನೋಟ ಇಲ್ಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.ಬಹುರೂಪಿಯ ಜಿ.ಎನ್. ಮೋಹನ್, ವಿ.ಎನ್.ಶ್ರೀಜಾ, ಕೃತಿಯ ಲೇಖಕ ಜಿ.ಎನ್.ರಂಗನಾಥ ರಾವ್,ಸಂಘದ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್,ಕಾರ್ಯದರ್ಶಿ ಜಿ.ಸಿ.ಲೋಕೇಶ್ ಉಪಸ್ಥಿತರಿದ್ದರು.