ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50 ಅನುದಾನ ಖರ್ಚು ಮಾಡದ ರಾಜ್ಯ ಸರ್ಕಾರ

ಹಿಂದುಳಿದ ವರ್ಗ, ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಬಜೆಟ್ ಹಣ: ಕೆ.ಎಸ್. ಈಶ್ವರಪ್ಪ ಆರೋಪ
Last Updated 3 ಏಪ್ರಿಲ್ 2018, 11:43 IST
ಅಕ್ಷರ ಗಾತ್ರ

ಹಾವೇರಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಿದ್ದು, ಐದು ವರ್ಷಗಳ ಬಜೆಟ್‌ನಲ್ಲಿ ಮೀಸಲಿಟ್ಟ ಹಣದ ಶೇ 50 ಅನ್ನೂ ಖರ್ಚು ಮಾಡಿಲ್ಲ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಹಿಂದುಳಿದ ಮತ್ತು ದಲಿತ ಸಮುದಾಯಗಳಿಗೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಮೇಲೆ ಆಕ್ರೋಶ ಇದೆ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಹಿಂದುಳಿದ ಮತ್ತು ದಲಿತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಕಾಗಿನಲೆಯ ನಿರಂಜನಾನಂದಪುರಿ ಸ್ವಾಮೀಜಿ ಮತ್ತು ಉಪ್ಪಾರ ಸಮಾಜದ ಗುರು ಪುರುಷೋತ್ತಮಾನಂದ ಸ್ವಾಮಿಜಿ ನೇತೃತ್ವದಲ್ಲಿ 36 ಮಠಾಧೀಶರು ಸರ್ಕಾರದ ಬಳಿ ಬಂದಿದ್ದರು. ಅವರ ಬೇಡಿಕೆಗಳಿಗೆ ಅನುಗುಣವಾಗಿ ಪ್ರತಿ ಮಠಗಳಿಗೆ ತಲಾ ₹1 ಕೋಟಿಯಿಂದ ₹5 ಕೋಟಿ ತನಕ ಅನುದಾನ ನೀಡಿದ್ದೆವು. ಈ ಮಠಗಳು ಸರ್ಕಾರದಂತೆ ಕೆಲಸ ನಿರ್ವಹಿಸಿವೆ ಎಂದರು.ಆದರೆ, ಸಿದ್ದರಾಮಯ್ಯ ಇನ್ನೂ ಹೆಚ್ಚು ಹಣ ನೀಡಬಹುದು ಎಂಬ ಅವರ ನಿರೀಕ್ಷೆ ಸುಳ್ಳಾಗಿದ್ದು, ಬಿಜೆಪಿ ಸರ್ಕಾರ ಮತ್ತೆ ಬರಲಿ ಎಂದು ಕಾಯುತ್ತಿದ್ದಾರೆ’ ಎಂದು ಹೇಳಿದರು.

‘ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವ ಮಸೂದೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಆದರೆ, ಬಿಜೆಪಿಗೆ ರಾಜ್ಯ ಸಭೆಯಲ್ಲಿ ಬಹುಮತ ಇಲ್ಲದ ಕಾರಣ ಮಸೂದೆ ಪಾಸ್‌ ಆಗುವಲ್ಲಿ ವಿಳಂಬವಾಗಿತ್ತು’ ಎಂದು ತಿಳಿಸಿದರು.

ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಲಿ:‘ವರುಣಾ ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗನ ವಿರುದ್ಧ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪರ್ಧಿಸಬೇಕು ಎಂಬ ಬೇಡಿಕೆಯನ್ನು ಕಾರ್ಯಕರ್ತರು ಮಾಡಿದ್ದರು. ಇದಕ್ಕೆ, ‘ವಿಜಯೇಂದ್ರ ಅಲ್ಲ, ಅವರ ಅಪ್ಪ ಬೇಕಾದರೂ ಬಂದು ನಿಲ್ಲಲ್ಲಿ’ ಎಂದು ಸಿ.ಎಂ. ಸಿದ್ದರಾಮಯ್ಯ ಪ್ರತಿಕ್ರಿಯಿಸಿರುವುದು, ಅವರ ಸ್ಥಾನಕ್ಕೆ ತಕ್ಕದಾದ ಮಾತಲ್ಲ ಎಂದ ಕೆ.ಎಸ್. ಈಶ್ವರಪ್ಪ, ‘ಬೇರೆ ಬೇರೆ ಪದ ಬಳಕೆ ನನಗೂ ಗೊತ್ತಿದೆ. ಆದರೆ, ಅದು ಸರಿಯಲ್ಲ’ ಎಂದರು.

ಊಟಕ್ಕೆ ಅನುಮತಿ ನೀಡಿ:‘ಹೆಂಡ ವಿತರಣೆ ಅಥವಾ ಮಾಂಸದೂಟ ನೀಡುವುದಕ್ಕೆ ಚುನಾವಣಾ ಆಯೋಗವು ಬಿಗಿ ಮಾಡಲಿ. ಆದರೆ, ಸಮಾವೇಶಗಳಿಗೆ ದೂರದಿಂದ ಬರುವ ಕಾರ್ಯಕರ್ತರು ಉಪವಾಸ ಬೀಳುವಂತೆ ಮಾಡಬಾರದು. ನಾವು ನೀಡಿದ ಊಟದ ಸಂಪೂರ್ಣ ವೆಚ್ಚ ಸಲ್ಲಿಸುತ್ತೇವೆ. ಸಮಾವೇಶದಲ್ಲಿ ಊಟ ನೀಡಲು ಅವಕಾಶ ಮಾಡಿಕೊಡಬೇಕು’ ಎಂದು ಈಶ್ವರಪ್ಪ ಅವರು ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಮಾಡಿದರು.

ಆಕಾಂಕ್ಷಿಗಳು ಅಪೇಕ್ಷೆಯೇ ಹೊರತು, ಅಶಿಸ್ತು ಅಲ್ಲ’

ಹಾವೇರಿ: ‘ಯಾವುದೇ ಕ್ಷೇತ್ರದ ಅಭ್ಯರ್ಥಿ (ಟಿಕೆಟ್) ಘೋಷಣೆಯು ಅಸಿಂಧು ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದು, ಹಲವರು ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಇದು ಆಕಾಂಕ್ಷಿಗಳ ಅಶಿಸ್ತು ಅಲ್ಲ, ಅವರ ಅಪೇಕ್ಷೆ’ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಹೀಗಾಗಿ ಯಾರೂ ಬೇಕಾದರೂ ಟಿಕೆಟ್ ಕೇಳಬಹುದು. ನಾವೆಲ್ಲ ಒಂದು ಕುಟುಂಬದಂತೆ ಚರ್ಚೆ ಮಾಡುತ್ತೇವೆ. ಇದರಲ್ಲಿ ಭಿನ್ನಾಭಿಪ್ರಾಯಗಳು ಇಲ್ಲ’ ಎಂದು ಸಮಜಾಯಿಷಿ ನೀಡಿದರು. ಶಾಸಕ ಬಸವರಾಜ ಬೊಮ್ಮಾಯಿ ವಿರುದ್ಧದ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಬಂಡಾಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಆಕಾಂಕ್ಷಿಗಳು ಆತಂಕದಲ್ಲಿ ಏನೇನೋ ಮಾತನಾಡಬಾರದು. ಪಕ್ಷದ ವಿರುದ್ಧದ ಮಾತು ಸರಿಯಲ್ಲ. ಆದರೆ, ಬೇವಿನಮರದ ಅವರು ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದಾರೆ. ಸ್ಪರ್ಧಿಸುವ ಅವರ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ’ ಎಂದರು.ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್. ಶಂಕರ್ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಈ ಬಗ್ಗೆ ನನ್ನ ಬಳಿ ಮಾತುಕತೆ ನಡೆದಿಲ್ಲ’ ಎಂದರು.

‘ಊಟಕ್ಕೆ ಅನುಮತಿ ನೀಡಿ’

‘ಹೆಂಡ ವಿತರಣೆ ಅಥವಾ ಮಾಂಸದೂಟ ನೀಡುವುದಕ್ಕೆ ಚುನಾವಣಾ ಆಯೋಗವು ಬಿಗಿ ಮಾಡಲಿ. ಆದರೆ, ಸಮಾವೇಶಗಳಿಗೆ ದೂರದಿಂದ ಬರುವ ಕಾರ್ಯಕರ್ತರು ಉಪವಾಸ ಬೀಳುವಂತೆ ಮಾಡಬಾರದು. ನಾವು ನೀಡಿದ ಊಟದ ಸಂಪೂರ್ಣ ವೆಚ್ಚ ಸಲ್ಲಿಸುತ್ತೇವೆ. ಸಮಾವೇಶದಲ್ಲಿ ಊಟ ನೀಡಲು ಅವಕಾಶ ಮಾಡಿಕೊಡಬೇಕು’ ಎಂದು ಈಶ್ವರಪ್ಪ ಅವರು ಜಿಲ್ಲಾ ಚುನಾವಣಾಧಿಕಾರಿಗೆ ಮನವಿ ಮಾಡಿದರು.

**

ಕಂಬಳಿ ಬೀಸಿದರೆ, ದೆಹಲಿಯಲ್ಲಿ ಪ್ರಧಾನಿ ಮಾತು ಕೇಳುತ್ತಾರೆ ಎಂದು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆಯೇ ಹೊರತು, ಸಿದ್ದರಾಮಯ್ಯಗೆ ಬೆಂಬಲ ನೀಡಿ ಎಂದಿಲ್ಲ – ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT