ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ಮಂಗಳವಾರ ನಾಮಪತ್ರ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಚುನಾವಣಾಧಿಕಾರಿಯೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಮಾತನಾಡಿದ ಯೂಸುಫ್ ಷರೀಫ್, ‘ನಮ್ಮ ಪಕ್ಷದ ಎಲ್ಲ ನಾಯಕರ ಆಶೀರ್ವಾದ ನನಗಿದೆ. ನಾನು ಈ ಕ್ಷೇತ್ರದಲ್ಲಿ ಗೆಲವು ಸಾಧಿಸುತ್ತೇನೆ. ಕೋಲಾರದಲ್ಲಿ ಜನ ಸೇವೆ ಮಾಡುತ್ತಿದ್ದೆ. ಇನ್ನು ಬೆಂಗಳೂರಿನಲ್ಲಿಯೂ ಸೇವೆ ಮಾಡುವ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.
ಸುದ್ದಿಗಾರರ ಜೊತೆ ಮಾತನಾಡಿದ ರಾಮಲಿಂಗಾ ರೆಡ್ಡಿ, ‘ಯೂಸುಫ್ ಷರೀಫ್ ಅವರದ್ದು ಕೆಜಿಎಫ್ ಬಾಬು ಹೆಸರಷ್ಟೇ. ಅವರು ಬೆಂಗಳೂರಿಗರೇ. ಬೆಂಗಳೂರು ನಗರದಲ್ಲಿ ಅಭ್ಯರ್ಥಿ ಇಲ್ಲವೆಂದು ಕೋಲಾರದಿಂದ ಕರೆದುಕೊಂಡು ಬಂದು ಕಣಕ್ಕೆ ಇಳಿಸಿಲ್ಲ. ಅವರು ಬೆಂಗಳೂರಿಗೆ ಬಂದು 30 ವರ್ಷ ಆಯಿತು’ ಎಂದರು.