ಬೆಂಗಳೂರು:ಧಾರವಾಡದಲ್ಲಿ ಫೆಬ್ರುವರಿ 21ರಿಂದ 24ರವರೆಗೆ ಸರ್ಕಾರದ ವತಿಯಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಕುಸ್ತಿ ಹಬ್ಬಕ್ಕೆ ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷದ ಜನಪ್ರತಿನಿಧಿಗಳನ್ನು ಆಹ್ವಾನಿಸದ ಅಧಿಕಾರಿಗಳ ವಿರುದ್ಧ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಬುಧವಾರ ವಿಧಾನ ಪರಿಷತ್ನಲ್ಲಿ ಹಕ್ಕುಚ್ಯುತಿ ಮಂಡಿಸಿದ್ದಾರೆ.
‘ಅಧಿಕಾರಿಗಳು ಪಕ್ಷಪಾತ ಮಾಡಿದ್ದಾರೆ. ಇದರಿಂದ ನನ್ನ ಹಕ್ಕುಗಳಿಗೆ ಚ್ಯುತಿ ಉಂಟಾಗಿದೆ’ ಎಂದು ಹೇಳಿದ ಹೊರಟ್ಟಿ ಹಕ್ಕು ಚ್ಯುತಿ ಮಂಡಿಸಿದರು.
ಅದಕ್ಕೆ ಪಕ್ಷಭೇದ ಮರೆತು ಎಲ್ಲ ಸದಸ್ಯರು ಬೆಂಬಲ ಸೂಚಿಸಿದರಲ್ಲದೆ, ಈ ಹಿಂದೆ ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ವಿಧಾನ ಪರಿಷತ್ ಸದಸ್ಯರನ್ನು ಅವಮಾನಿಸಿದಾಗ ವಾಗ್ದಂಡನೆ ವಿಧಿಸಿದ ಪ್ರಕರಣ ನೆನಪಿಸಿದರು. ಅಲ್ಲದೆ, ಹೊರಟ್ಟಿ ಅವರಿಗೆ ಅವಮಾನಿಸಿದ ಅಧಿಕಾರಿಗಳ ವಾಗ್ದಂಡನೆ ಆಗ್ರಹಿಸಿದರು.
ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಅವರು ಈ ಹಕ್ಕುಚ್ಯುತಿಯನ್ನು ಹಕ್ಕು ಭಾದ್ಯತಾ ಸಮಿತಿಗೆ ವರ್ಗಾಯಿಸಿದರು.