ಬೆಂಗಳೂರು: ‘ಕೊರೊನಾ ಲಾಕ್ಡೌನ್ನಿಂದಾಗಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳು ಕೋರ್ಸ್ ಮುಗಿಸುವುದು ಸ್ವಲ್ಪ ವಿಳಂಬವಾಗಬಹುದೇ ಹೊರತು ಕ್ಯಾಂಪಸ್ ಆಯ್ಕೆಯ ಮೂಲಕ ಅವರು ಪಡೆದ ಉದ್ಯೋಗ ನಷ್ಟವಾಗದು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಪ್ರೊ.ಕರಿಸಿದ್ದಪ್ಪ ಅಭಿಪ್ರಾಯಪಟ್ಟಿದ್ದಾರೆ.
‘ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿದೆ ನಿಜ. ಆದರೆ ಐಟಿ ಕಂಪನಿಗಳಿಗೆ ಅವಕಾಶಗಳು ಹೆಚ್ಚಿವೆ. ಕ್ಯಾಂಪಸ್ನಲ್ಲಿ ಆಯ್ಕೆಯಾಗಿರುವವರನ್ನು ಕೈಬಿಡುವುದಿಲ್ಲ ಎಂದು ಟಿಸಿಎಸ್, ವಿಪ್ರೊ, ಇನ್ಫೊಸಿಸ್ನಂಥ ಪ್ರಮುಖ ಕಂಪನಿಗಳು ಹೇಳಿವೆ’ ಎಂದು ಅವರು ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಾಲೇಜು ಪುನರಾರಂಭ ಕುರಿತು ಯುಜಿಸಿಯಿಂದ ಹೊಸದಾಗಿ ಸೂಚನೆ ಬಂದಿದೆ. ಮೊದಲು ಸೆಮಿಸ್ಟರ್ ಪರೀಕ್ಷೆ ಕೊನೆಗೊಳಿಸಬೇಕಿದೆ. ಅಂತಿಮ ಸೆಮಿಸ್ಟರ್ನವರಿಗೆ ಮೊದಲು ಪರೀಕ್ಷೆ ನಡೆಸಿ ಅವರ ಉದ್ಯೋಗ ಭವಿಷ್ಯ ಭದ್ರಗೊಳಿಸುವ ವಿಚಾರ ಮಾಡಿದ್ದೇವೆ’ ಎಂದರು.
ತರಗತಿ ಕಡ್ಡಾಯ: ‘ಆನ್ಲೈನ್ನಲ್ಲಿ ತರಗತಿಗಳು ನಡೆಯುತ್ತಿವೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುವ ಅರಿವಿದೆ. ಹೀಗಾಗಿ, ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕನಿಷ್ಠ 10 ದಿನಗಳ ಹಾಗೂ ಉಳಿದ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 3ರಿಂದ 4 ವಾರಗಳ ಸಾಂಪ್ರದಾಯಿಕ ತರಗತಿ ನಡೆಸಲಾಗುವುದು’ ಎಂದರು.