ಹೆಸರಘಟ್ಟ: ಅದ್ದೆವಿಶ್ವನಾಥಪುರ ಕೆರೆಯಂಗಳಕ್ಕೆ ಕಟ್ಟಡ ಮತ್ತು ಹೊಟೇಲ್ ತಿನಿಸುಗಳ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಕಳೆದ ಐದಾರು ತಿಂಗಳಿನಿಂದ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಕಟ್ಟಡಗಳ ಇಟ್ಟಿಗೆ ಚೂರು, ಪ್ಲಾಸ್ಟಿಕ್, ಒಡೆದ ಗಾಜುಗಳನ್ನು ರಾಶಿ ಹಾಕುತ್ತಿದ್ದಾರೆ’ ಎಂದು ಗ್ರಾಮದ ನಿವಾಸಿ ವೆಂಕಟೇಶ್ ದೂರಿದರು.
‘ಕೆರೆಯ ಅಸುಪಾಸು ನವಿಲುಗಳಿವೆ. ಅನೇಕ ವೈವಿಧ್ಯಮಯ ಜೀವ ಸಂಕುಲವಿದೆ. ಕೆರೆಯಂಗಳದಲ್ಲಿ ಮಣ್ಣಿಗಾಗಿ ಗುಂಡಿ ತೆಗೆದು ಮರಗಳನ್ನು ಕೆಡವಿದ್ದಾರೆ. ಇದರಿಂದ ಅನೇಕ ಪಕ್ಷಿ ಸಂಕುಲ ನಾಶವಾಗಿವೆ. ಅಲ್ಲದೇ ನವಿಲುಗಳು ಸಾವು ಕಂಡಿವೆ. ಕೆರೆ ನಿರ್ವಹಣೆ ಮಾಡುತ್ತಿರುವ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಏನು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.
‘ರಾಜಾನುಕುಂಟೆ ಗ್ರಾಮ ಪಂಚಾಯಿತಿಯು ಕಸ ನಿರ್ವಹಣೆಗಾಗಿ ಘಟಕವೊಂದನ್ನು ಸ್ಥಾಪಿಸಿದೆ. ಆದರೆ, ಕೆರೆಗೆ ಕಸ ಹಾಕುವವರನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ.ಕಸ ಹಾಕುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ಪ್ರತಿಕ್ರಿಯಿಸಿ, ‘ಕೆರೆಯಲ್ಲಿ ಕಸ ಸುರಿಯುತ್ತಿರುವವರಿಗೆ ನೋಟಿಸ್ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆದು ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇನೆ’ ಎಂದರು.