ಕೆ.ಆರ್.ಪುರ: ‘ನಗರಗಳಲ್ಲಿ ನೀರಿನ ಬವಣೆ ಹೆಚ್ಚುತ್ತಿರುವುದರಿಂದ ಜಲಮೂಲಗಳನ್ನು ಸಂರಕ್ಷಿಸುವ ಜೊತೆಗೆ ಮುಂದಿನ ಪೀಳಿಗೆಗೆ ನೀರು ಲಭ್ಯವಾಗುವಂತೆ ಮಾಡಬೇಕಿದೆ’ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.
ಇಲ್ಲಿನ ಗರುಡಚಾರ್ ಪಾಳ್ಯದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಜಲಮೂಲಗಳು ಹಾಗೂ ಪರಿಸರ ಸಂರಕ್ಷಣೆ ಮಾಡುವುದೇ ಮುಂದಿನ ಪೀಳಿಗೆಗೆ ನಾವು ನೀಡುವ ಬಳುವಳಿ. ಇತ್ತೀಚಿನ ದಿನಗಳಲ್ಲಿ ಜಲಮೂಲಗಳು ಕಣ್ಮರೆಯಾಗುತ್ತಿವೆ. ಬಿಜೆಪಿ ಸರ್ಕಾರ ಬಂದ ನಂತರ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ’ ಎಂದರು.
‘ಮಹದೇವಪುರ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಸಿಎಸ್ಆರ್ ಅನುದಾನ ಸೇರಿದಂತೆ ವಿವಿಧ ಅನುದಾನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಕ್ಷೇತ್ರದಲ್ಲಿರುವ 40ಕ್ಕೂ ಹೆಚ್ಚು ಕೆರೆಗಳು ಅಭಿವೃದ್ಧಿ ಹಂತದಲ್ಲಿವೆ’ ಎಂದು ಹೇಳಿದರು.