ಬೆಂಗಳೂರು: ಮನೆ ಆರೈಕೆಯಲ್ಲಿರುವ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ‘ವೀ ವೈಶ್ಯ’ ಸಂಸ್ಥೆ ಸುಮಾರು ₹70 ಲಕ್ಷ ಮೌಲ್ಯದ 15 ಸಾವಿರ ಔಷಧ ಕಿಟ್ಗಳನ್ನು ಒದಗಿಸಿದೆ.
ಆರ್ಯ ವೈಶ್ಯ ವ್ಯಾಪಾರಿಗಳ ಸಂಸ್ಥೆ ಇದಾಗಿದ್ದು, ಕೋವಿಡ್ ಉಲ್ಬಣಗೊಂಡಿರುವ ಸಂದರ್ಭದಲ್ಲಿ ಸೋಂಕಿತರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದೆ.
ಕೋವಿಡ್ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಗೃಹ ಆರೈಕೆಯಲ್ಲಿ ಇರುವವರ ಜೀವ ಮತ್ತು ಜೀವನ ರಕ್ಷಿಸಲು ಐಸೋಲೇಷನ್ ಕಿಟ್ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರಿಗೆ ಈ ಕಿಟ್ಗಳನ್ನು ಹಸ್ತಾಂತರಿಸಲಾಗಿದೆ ಎಂದು ‘ವೀ ವೈಶ್ಯ’ ಸಂಸ್ಥೆಯ ಸಂಸ್ಥಾಪಕ ಅನಿಲ್ ಗುಪ್ತಾ ಮಾಹಿತಿ ನೀಡಿದರು.
‘ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಬೆಂಗಳೂರಿನಲ್ಲಿ ಆರೋಗ್ಯ, ನೆಮ್ಮದಿಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಸದಾ ಆರ್ಯ ವೈಶ್ಯರ ಸಮುದಾಯ ಮಂಚೂಣಿಯಲ್ಲಿರುತ್ತದೆ’ ಎಂದು ಹೇಳಿದರು.
‘ಸೋಂಕಿತರಿಗೆ ಇನ್ನಷ್ಟು ನೆರವಾಗಲು ಆಮ್ಲಜನಕ ನಿಧಿ ತೆರೆಯುಲಾಗುತ್ತಿದೆ. ಬೆಂಗಳೂರು, ಹೈದರಾಬಾದ್, ವಿಶಾಖಪಟ್ಟಣ, ಕೊಯಮತ್ತೂರಿನಲ್ಲಿ ಆಕ್ಸಿಜನ್ ಬ್ಯಾಂಕ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ’ ಎಂದು ಸಂಸ್ಥೆಯ ಅಧ್ಯಕ್ಷೆ ಭಾವನಾ ತಿಳಿಸಿದರು.