ಯಲಹಂಕ: ಇಲ್ಲಿನ ಇತಿಹಾಸ ಪ್ರಸಿದ್ಧ ವಹ್ನಿಕುಲ ಕ್ಷತ್ರಿಯ ಆರಾಧ್ಯದೇವಿ ಮಹೇಶ್ವರಮ್ಮನವರ ಕರಗ ಮಹೋತ್ಸವಕ್ಕೆ ಭಾನುವಾರ ಚಾಲನೆ ದೊರೆತಿದೆ.
ಸೋಮವಾರ ಬೆಳಗಿನ ಜಾವ 4 ಗಂಟೆಗೆ ಹಸಿಕರಗ, ಮಂಗಳವಾರ ರಾತ್ರಿ 10 ಗಂಟೆಗೆ ಬಾಯಿಕಟ್ಟುವುದು ಹಾಗೂ ಆರತಿದೀಪಗಳ ಸಮೇತ ಅಗ್ನಿಕುಂಡ ಪ್ರವೇಶ ನೆರವೇರಲಿದೆ ಎಂದು ಎಂದು ವಹ್ನಿಕುಲ ಕ್ಷತ್ರಿಯ ಮಂಡಳಿಯ ಸಂಚಾಲಕ ಮು.ಕೃಷ್ಣಮೂರ್ತಿ ತಿಳಿಸಿದ್ದಾರೆ.
‘ಬುಧವಾರ ರಾತ್ರಿ 12 ಗಂಟೆಗೆ ಮಹೇಶ್ವರಮ್ಮ ದೇವಿಯ ಹೂವಿನ ಕರಗ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವ ನಡೆಯಲಿದೆ. ಸುತ್ತಮುತ್ತಲಿನ ಗ್ರಾಮಗಳ 25 ದೇವರುಗಳ ಮುತ್ತಿನ ಪಲ್ಲಕ್ಕಿಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಉತ್ಸವದ ಪ್ರಯುಕ್ತ ಇಲ್ಲಿನ ಕೆರೆಯಲ್ಲಿರುವ ಕರಗ ಮಂಟಪವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಈ ಸಲ ಮುನಿರಾಜು ಅವರು ಕರಗವನ್ನು ಹೊರಲಿದ್ದಾರೆ. ಶಕ್ತಿದೇವತೆ ಮಹೇಶ್ವರಮ್ಮನವರ ಕರಗ, ಮನೆಗಳ ಮುಂಭಾಗಕ್ಕೆ ಬರುತ್ತಿದ್ದಂತೆ ಆರತಿ ಬೆಳಗಿ ಹೂವಿನ ಅರ್ಚನೆ ಮಾಡುವುದು ಇಲ್ಲಿನ ವಿಶೇಷ.