ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ಗೃಹ ಸಚಿವರಾಗಿದ್ದ ಡಾ.ಜಿ. ಪರಮೇಶ್ವರ ಅವರನ್ನು ಇತ್ತೀಚೆಗೆ ವಿಚಾರಣೆ ನಡೆಸಿದ ಸಿಬಿಐ ತಂಡ, ಅವರ ಹೇಳಿಕೆ ದಾಖಲಿಸಿಕೊಂಡಿದೆ.
2016ರ ಜೂನ್ 15ರಂದು ಯೋಗೇಶ್ ಗೌಡ ಕೊಲೆ ನಡೆದಿತ್ತು. ಆಗ ಪರಮೇಶ್ವರ ಗೃಹ ಸಚಿವರಾಗಿದ್ದರು. ‘ಭೂ ವಿವಾದದ ಕಾರಣದಿಂದ ಕೊಲೆ ನಡೆದಿರುವ ಮಾಹಿತಿ ಲಭಿಸಿದೆ’ ಎಂದು ಪರಮೇಶ್ವರ ಆ ದಿನವೇ ಹೇಳಿಕೆ ನೀಡಿದ್ದರು. ಈ ಕುರಿತು ಸಿಬಿಐ ಅಧಿಕಾರಿಗಳ ತಂಡ ವಿಚಾರಣೆ ನಡೆಸಿದೆ ಎಂದು ಗೊತ್ತಾಗಿದೆ.
ಪರಮೇಶ್ವರ ಅವರ ಮನೆಗೆ ತೆರಳಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಕೊಲೆ ನಡೆದ ದಿನ ಯಾವ ಮೂಲದಿಂದ ಅವರಿಗೆ ಆ ಮಾಹಿತಿ ಲಭಿಸಿತ್ತು ಮತ್ತು ಪೊಲೀಸ್ ಅಧಿಕಾರಿಗಳಿಂದ ಯಾವ ರೀತಿಯ ವರದಿಗಳು ಬಂದಿದ್ದವು ಎಂಬುದರ ಕುರಿತು ತನಿಖಾ ತಂಡ ಮಾಹಿತಿ ಸಂಗ್ರಹಿಸಿದೆ.