ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟಿದ್ದ ಪೌರಕಾರ್ಮಿಕರ ಕುಟುಂಬದವರಿಗೆ ಶನಿವಾರ ₹10 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶನ್ ಹಾಗೂ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಶಿವಣ್ಣ ಅವರು ಈ ಚೆಕ್ ವಿತರಿಸಿದರು.
ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೌರಮ್ಮ ಮತ್ತು ಮರಿಯಮ್ಮ ಅವರು ಮೂರು ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಅವಲಂಬಿತರ ಮನೆಗೆ ತೆರಳಿ ಚೆಕ್ ನೀಡಲಾಯಿತು.
‘ಅವಲಂಬಿತ ಕುಟುಂಬದ ಸದಸ್ಯರಿಗೆ ಪಾಲಿಕೆಯು ನೇರವಾಗಿ ಪರಿಹಾರ ನೀಡುತ್ತಿದೆ. ಯಾರಾದರೂ ಮಧ್ಯವರ್ತಿಗಳು ಬಂದು ಹಣ ಕೇಳಿದರೆ ಅಥವಾ ಪೀಡಿಸಿದರೆ ನೇರವಾಗಿ ಪಾಲಿಕೆಯ ಜಂಟಿ ಆಯುಕ್ತರಿಗೆ ದೂರು ನೀಡಿ’ ಎಂದು ಕುಟುಂಬದ ಸದಸ್ಯರಿಗೆ ವೆಂಕಟೇಶನ್ ತಿಳಿ ಹೇಳಿದರು.
ಶಿವಣ್ಣ, ‘ಮೃತರ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ಹಣಕಾಸಿನ ನೆರವಿನ ಜೊತೆಗೆ ಉದ್ಯೋಗ ನೀಡಬೇಕು’ ಜಂಟಿ ಆಯುಕ್ತರಿಗೆ ಸೂಚಿಸಿದರು.
‘ಪರಿಹಾರದ ಮೊತ್ತವನ್ನು ಮೃತರ ಕುಟುಂಬದ ಮಕ್ಕಳ ಹೆಸರಿನಲ್ಲಿ ಠೇವಣಿ ಇಟ್ಟು ಅವರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಬಳಸಿಕೊಳ್ಳಿ’ ಎಂದು ಅವರು ಸಲಹೆ ನೀಡಿದರು.