ಬೆಂಗಳೂರು: ಫೇಸ್ಬುಕ್ನಲ್ಲಿ ಪರಿಚಯಿಸಿಕೊಂಡು ಪ್ರೀತಿ, ಪ್ರೇಮ, ಪ್ರಣಯವೆಂದು ವೈದ್ಯೆಯೊಬ್ಬರ ಬೆನ್ನುಬಿದ್ದು ತಾಳಿಕಟ್ಟಿದ ವೈದ್ಯ, ವೈವಾಹಿಕ ಬದುಕಿಗೆ ಒಂಬತ್ತು ತಿಂಗಳು ತುಂಬುವ ಮೊದಲೇ ಆಕೆಯ ಹೆಸರಿನಲ್ಲಿ ₹ 22 ಲಕ್ಷ ಸಾಲ ಪಡೆದು ಕೈಕೊಟ್ಟಿದ್ದಾನೆ!
ಎರಡೂ ಕುಟುಂಬಗಳು ಒಪ್ಪಿ ವೈದ್ಯ ಜೋಡಿ ಸಪ್ತಪದಿ ತುಳಿದಿತ್ತು. ಆದರೆ, ದಾಂಪತ್ಯದ ಆರಂಭದ ದಿನಗಳಲ್ಲೇ ಅವರ ಮಧ್ಯೆ ಜಾತಿ ಅಡ್ಡ ಬಂತು. ಪ್ರೀತಿ ಮುರಿದುಬಿತ್ತು. ವೈದ್ಯೆಯ ಪೋಷಕರನ್ನು ಬೆದರಿಸಿ ಲಕ್ಷಾಂತರ ಹಣ ಕಿತ್ತುಕೊಂಡ ವೈದ್ಯನನ್ನು ರಾಮಮೂರ್ತಿನಗರ ಪೊಲೀಸರು ಕಂಬಿಯೊಳಗೆ ನೂಕಿದ್ದಾರೆ. ವೈದ್ಯನ ಬಲೆಗೆ ಬಿದ್ದು ಮಾನಸಿಕವಾಗಿ ನರಳುತ್ತಿರುವ ವೈದ್ಯೆಗೆ, ಪೋಷಕರು ಆಪ್ತ ಸಮಾಲೋಚನೆ ಮೂಲಕ ಧೈರ್ಯ ತುಂಬುತ್ತಿದ್ದಾರೆ.
ವೈದ್ಯೆ ನೀಡಿದ ವರದಕ್ಷಿಣೆ ಕಿರುಕುಳ ದೂರಿನ ಆಧಾರದಲ್ಲಿ ತಿರುಪತಿಯ ನಿವಾಸಿ, ಪತಿ ಇರಲಾ ಸಾಯಿ ಪ್ರಸಾದ್, ಆತನ ತಂದೆ ಲೋಕನಾಥ ರೆಡ್ಡಿ, ತಾಯಿ ವಾಣಿ ಮತ್ತು ಅಣ್ಣ ಭರತ್ ಕುಮಾರ್ ರೆಡ್ಡಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪತಿ ಮತ್ತು ಆತನ ಅಣ್ಣನನ್ನು ಬಂಧಿಸಿದ್ದಾರೆ.
ಬೆಳಗಾವಿಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ ಯುವತಿಯ ತಂದೆ ಸಿನಿಮಾ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಅಪ್ಪನ ಬಗ್ಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ವೈದ್ಯೆ ಹೇಳಿಕೊಂಡಿದ್ದಳು. ಅದನ್ನು ನೋಡಿ ‘ಫ್ರೆಂಡ್ಶಿಪ್’ ರಿಕ್ವೆಸ್ಟ್ ಕಳುಹಿಸಿ ಆತ ಆತ್ಮೀಯನಾಗಿದ್ದ. ವಿವಾಹವಾಗಲು ಇಬ್ಬರೂ ನಿರ್ಧರಿಸಿದ್ದರಿಂದ, ವೈದ್ಯೆಯ ಪೋಷಕರು 2019ರ ಫೆ. 22ರಂದು ₹ 5 ಲಕ್ಷ ವೆಚ್ಚದಲ್ಲಿ ನಿಶ್ಚಿತಾರ್ಥ ಮಾಡಿದ್ದರು.
‘ಮದುವೆ ವೇಳೆ ವೈದ್ಯನ ಪೋಷಕರು ₹ 25 ಲಕ್ಷ ವರದಕ್ಷಿಣೆ ಕೇಳಿದ್ದರು. ನನ್ನ ತಂದೆ ₹ 10 ಲಕ್ಷ ನಗದು ಮತ್ತು ₹ 5 ಲಕ್ಷವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. ಮಾರ್ಚ್ 31ರಂದು ತಿರುಪತಿಯಲ್ಲಿ ಮದುವೆಯಾದೆವು. ಆದರೆ, 10 ದಿನ ಕಳೆಯುವಷ್ಟರಲ್ಲಿ ಪತಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಅವನ ಪೋಷಕರು ಹೆಚ್ಚುವರಿಯಾಗಿ ₹ 20 ಲಕ್ಷ ವರದಕ್ಷಿಣೆಗಾಗಿ ಬೇಡಿಕೆ ಇಟ್ಟರು. ಕೊಡದೇ ಇದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದರು’ ಎಂದು ವೈದ್ಯೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಮಮೂರ್ತಿ ನಗರ ಪೊಲೀಸ್ ಇನ್ಸ್ಪೆಕ್ಟರ್, ‘ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಹುಡುಗನ ಪೋಷಕರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ’ ಎಂದರು.