ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬೇವೂರು ತಿಮ್ಮಪ್ಪ ದೇವರ ಬ್ರಹ್ಮರಥೋತ್ಸವ ಶನಿವಾರ (ಅ.20) ನಡೆಯಲಿದೆ. ಬೆಳಿಗ್ಗೆ 9.30 ರಿಂದ 10.30 ರವರೆಗೆ ರಥಶಾಂತಿ ಪೂಜೆ, ಮಧ್ಯಾಹ್ನ 12 ರಿಂದ 12.30 ರ ಶುಭ ಧನುರ್ ಲಗ್ನದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ.
ತಿಮ್ಮಪ್ಪ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಬ್ರಹ್ಮರಥೋತ್ಸವ ಜವಾಬ್ದಾರಿಯನ್ನು ತಹಶೀಲ್ದಾರ್ ಅವರು ವಹಿಸಲಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡಲಿದ್ದಾರೆ.
ಜೊತೆಗೆ ಗರಡೋತ್ಸವ, ಗಜೋತ್ಸವ, ಶ್ರೀಯವರ ಕಲ್ಯಾಣೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ವಿವಿಧ ಜನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇವರ ದರ್ಶನಕ್ಕೆ ಬರುವ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಭಕ್ತಾಧಿಗಳು ಬರುವುದು ಇಲ್ಲಿಯ ವಿಶೇಷ.
ಚನ್ನಪಟ್ಟಣದಿಂದ 11 ಕಿ.ಮೀ ದೂರದಲ್ಲಿರುವ ಬೇವೂರು ತಿಮ್ಮಪ್ಪ ಬೆಟ್ಟ ಧಾರ್ಮಿಕ ನೆಲೆಗಳಲ್ಲಿ ಒಂದಾಗಿದೆ. ಬೇವೂರು ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮವಾಗಿದ್ದು, ಈ ಗ್ರಾಮದ ಜೈನರ ಪ್ರಮುಖ ಕೇಂದ್ರವಾಗಿತ್ತು ಎನ್ನುವುದಕ್ಕೆ ದಾಖಲೆಗಳಿವೆ ಎಂದು ದೇವಸ್ಥಾನದ ಮೇಲ್ವಿಚಾರಕರಾದ ಬಿ.ಸಿ.ಪುಟ್ಟಸ್ವಾಮಿ, ಅರ್ಚಕ ವೆಂಕಟೇಶ್ ತಿಳಿಸಿದ್ದಾರೆ.