ಬೀದರ್: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ರಾಮ ಮಂದಿರಕ್ಕೆ ಖೂಬಾ ಪರಿವಾರದವರು ₹ 11 ಲಕ್ಷ ದೇಣಿಗೆ ಕೊಟ್ಟಿದ್ದಾರೆ.
ಸಂಸದ ಭಗವಂತ ಖೂಬಾ ಅವರು ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹಾಗೂ ವಿಶ್ವ ಹಿಂದೂ ಪರಿಷತ್ ಪ್ರಮುಖರ ಸಮ್ಮುಖದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ಚೆಕ್ ಹಸ್ತಾಂತರಿಸಿದರು.
ರಾಮ ಭಕ್ತರ ಬಹು ದಿನಗಳ ಆಶಯದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಈಗಾಗಲೇ ಆರಂಭಗೊಂಡಿದೆ. ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಪರ ಸಂಘಟನೆಗಳು ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ಅಭಿಯಾನ ಆರಂಭಿಸಿವೆ. ಅಭಿಯಾನಕ್ಕೆ ದೇಶದಾದ್ಯಂತ ಭರಪೂರ ಮನ್ನಣೆ ದೊರಕಿದೆ ಎಂದು ಖೂಬಾ ತಿಳಿಸಿದರು.
ಕುಟುಂಬದ ಸದಸ್ಯರು ಒಗ್ಗೂಡಿ ಮಂದಿರಕ್ಕೆ ದೇಣಿಗೆ ಕೊಡಬೇಕು. ಇದರಿಂದ ಕುಟುಂಬ ಸದಸ್ಯರ ಬಾಂಧವ್ಯ ವೃದ್ಧಿಸುತ್ತದೆ. ಭವ್ಯ ರಾಮ ಮಂದಿರ ನಿರ್ಮಾಣವೂ ಆಗುತ್ತದೆ ಎಂದು ಹೇಳಿದರು.
ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಹಣಮಂತರಾವ್ ಪಾಟೀಲ, ನಾಗೇಶ ರೆಡ್ಡಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಜಗದೀಶ ಖೂಬಾ ಇದ್ದರು.