ಬೀದರ್: ಹದಿನೈದು ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ನಗರದ ಜನತೆಯ ಮೊಗದಲ್ಲಿ ಶುಕ್ರವಾರ ಸಂಜೆ ವರುಣನ ಸಿಂಚನವು ಮಂದಹಾಸ ಮೂಡಿಸಿತು. 15 ನಿಮಿಷ ಅಬ್ಬರಿಸಿದ ಮಳೆಯಿಂದ ನಗರಕ್ಕೆ ತಂಪೆರೆದಂತಾಯಿತು.
ತಾಪಮಾನ ಮಧ್ಯಾಹ್ನ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿತ್ತು. ಬೆಳಿಗ್ಗೆಯಿಂದ ಸಂಜೆಯವರೆಗೆ ನೆತ್ತಿ ಸುಡುವ ಬಿಸಿಲಿಗೆ ಜನ ಬಸವಳಿದಿದ್ದರು ಸಿಮೆಂಟ್ ಕಟ್ಟಡಗಳು ಸಹ ಬಿಸಿಯಾಗಿದ್ದವು.
ಮಳೆ ಸುರಿಯುತ್ತಿದ್ದಂತೆಯೇ ನಗರದ ಜನತೆ ಸಂತಸಗೊಂಡರು. ಕೆಲವರು ಮಳೆಯಲ್ಲೇ ಸಾಗಿದರು. ಮಕ್ಕಳು ಮಳೆಯಲ್ಲಿ ಕುಣಿದು ಕುಪ್ಪಳಿಸಿದರು. 10 ನಿಮಿಷದಲ್ಲೇ ನೀರು ಭೂಮಿಯೊಳಗೆ ಇಂಗಿ ಯಥಾಸ್ಥಿತಿಗೆ ಬಂದಿತು.