ಬಸವಕಲ್ಯಾಣ: ಬಿಜೆಪಿ ಮುಖಂಡ ಶರಣು ಸಲಗರ ಅವರಿಗೆ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಸಿಗಲೆಂದು ಪ್ರಾರ್ಥಿಸಿ ಬುಧವಾರ ಅವರ ಅಭಿಮಾನಿಗಳು ತಾಲ್ಲೂಕಿನ ಜಾಫರವಾಡಿ ಗ್ರಾಮದಿಂದ ಹಾರಕೂಡ ಹಿರೇಮಠದವರೆಗೆ 18 ಕಿಲೊ ಮೀಟರ್ ಪಾದಯಾತ್ರೆ ನಡೆಸಿದರು.
ಈ ಸಂದರ್ಭದಲ್ಲಿ ಇಬ್ಬರು ದಂಪತಿ ದೀರ್ಘದಂಡ ನಮಸ್ಕಾರ ಹಾಕಿ ಗಮನ ಸೆಳೆದರು.
ಜಾಫರವಾಡಿ ಗ್ರಾಮದ ಕಸ್ತೂರಬಾಯಿ ಚಂದ್ರಕಾಂತ ಮುಳೆ, ಅನಸೂಯಾಬಾಯಿ ಅಂಬಾರಾಯ ಮೇತ್ರೆ ದೀರ್ಘದಂಡ ನಮಸ್ಕಾರ ಹಾಕಿದ ದಂಪತಿಗಳು.
ವಿವಿಧ ಗ್ರಾಮಗಳ 150ಕ್ಕೂ ಹೆಚ್ಚಿನ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಗುಂಡೂರ, ಯಲ್ಲದಗುಂಡಿ, ತಾಂಡಾ ಮೂಲಕ ಪಾದಯಾತ್ರೆ ಹಾರಕೂಡ ತಲುಪಿತು.
ಹಾರಕೂಡ ಹಿರೇಮಠದಲ್ಲಿ ಸುರೇಶ ಮುಳೆ 101 ತೆಂಗು ಅರ್ಪಿಸಿ ಹರಕೆ ತೀರಿಸಿದರು. ಮಠಾಧಿಪತಿ ಚನ್ನವೀರ ಶಿವಾಚಾರ್ಯರು ಈ ದಂಪತಿ ಹಾಗೂ ಇತರರನ್ನು ಸತ್ಕರಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಗನ್ನಾಥ ಪಾಟೀಲ ಮಂಠಾಳ ಪಾದಯಾತ್ರೆಗೆ ಚಾಲನೆ ನೀಡಿದರು.