ಬೀದರ್: ಜಿಲ್ಲಾಡಳಿತದ ಸಹಕಾರದೊಂದಿಗೆ ಸೇನಾ ನೇಮಕಾತಿ ವಿಭಾಗದವರು ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಮಂಗಳವಾರ ಅಗ್ನಿ ಪಥ ಅಗ್ನಿ ವೀರರಿಗಾಗಿ ನಡೆಸಿದ ಸೇನಾ ನೇಮಕಾತಿ ರ್ಯಾಲಿಯಲ್ಲಿ 2,132 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾದರು.
ಕುಷ್ಟಗಿಯ 1520, ಕೊಪ್ಪಳ ತಾಲ್ಲೂಕಿನ 612 ಯುವಕರು ಹಾಗೂ ಸೋಮವಾರ ಅಫಿಡವಿಟ್ ಸಲ್ಲಿಸಲು ವಿಳಂಬ ಮಾಡಿದ ಯುವಕರಿಗೆ ಅವಕಾಶ ಕಲ್ಪಿಸಲಾಯಿತು.
ರೋಟರಿ ವೃತ್ತ ಬಳಿಯ ಸಾಯಿ ಆದರ್ಶ ಶಾಲೆಯ ಆವರಣ, ಮೇಲ್ಚಾವಣಿ, ಮೈದಾನ, ಬಸ್ ತಂಗು ನಿಲ್ದಾಣ, ನಗರಸಭೆ ಕಚೇರಿ ಆವರಣ, ಗ್ರಾಮೀಣ ಬಸ್ ನಿಲ್ದಾಣ, ಹಾಗೂ ರೈಲು ನಿಲ್ದಾಣದಲ್ಲಿ ತಂಗಿದ್ದ ಅಭ್ಯರ್ಥಿಗಳು ಬೆಳಗಿನ ಜಾವ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಿದರು.
ಕೆಲ ಯವಕರು ಶಿವಾಜಿ ವೃತ್ತದಲ್ಲಿರುವ ಪ್ರತಿಮೆಯ ಬಳಿಯ ಸಾರ್ವಜನಿಕ ನಳದಲ್ಲಿನ ನೀರು ಪಡೆದು ಸ್ನಾನ ಮಾಡಿದರು. ಜಿಲ್ಲಾಡಳಿತ ಮೊದಲ ದಿನ ಎದುರಾಗಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡು ಕಾರಣ ಮಂಗಳವಾರ ಯಾವುದೇ ಸಮಸ್ಯೆ ಕಂಡು ಬರಲಿಲ್ಲ.
ಪೊಲೀಸ್ ಸಿಬ್ಬಂದಿ ಬೆಳಗಿನ ಜಾವ ರೋಟರಿ ವೃತ್ತದ ಮಾರ್ಗದಲ್ಲಿನ ದಟ್ಟಣೆ ನಿಯಂತ್ರಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಡಿಎಆರ್ ತುಕಡಿಯನ್ನು ನಿಯೋಜಿಸಲಾಗಿತ್ತು. ಡಿ.7 ರಂದು ಕಲಬುರಗಿ, 8 ರಂದು ಯಾದಗಿರಿ ಜಿಲ್ಲೆಯ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲನೆ ನಡೆಯಲಿದೆ.