ಬೀದರ್: ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.
ನಗರದ ನೂಪುರ ನೃತ್ಯ ಅಕಾಡೆಮಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡ ಕಟ್ಟುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕನ್ನಡ ಒಂದು ಭಾಷೆಯಷ್ಟೇ ಅಲ್ಲ; ಜೀವನ ವಿಧಾನವೂ ಹೌದು. ಕನ್ನಡಿಗರು ಅನ್ಯ ಭಾಷೆಗಳನ್ನು ಗೌರವಿಸುವ, ಕಲಿಯುವ ಉದಾರ ಗುಣ ಹೊಂದಿದ್ದಾರೆ. ತಾಳ್ಮೆ, ಸಹಿಷ್ಣುತೆ, ಭ್ರಾತೃತ್ವ, ಭಾವೈಕ್ಯ ಕನ್ನಡಿಗರ ಅಸ್ಮಿತೆಗಳಾಗಿವೆ ಎಂದು ತಿಳಿಸಿದರು.
ಕನ್ನಡ ಪರ ಸಂಘ ಸಂಸ್ಥೆಗಳು ಕನ್ನಡಿಗರಲ್ಲಿ ಮಾತೃ ಭಾಷೆ ಪ್ರೇಮ ಬೆಳೆಸುವ ದಿಸೆಯಲ್ಲಿ ಕೆಲಸ ಮಾಡಬೇಕಿದೆ. ಕನ್ನಡದ ಬೆಳವಣಿಗೆಗೆ ಎಲ್ಲರೂ ಕನ್ನಡ ಪತ್ರಿಕೆಗಳನ್ನು ಓದಬೇಕು. ಪ್ರತಿ ಮನೆಗಳಲ್ಲೂ ಕನ್ನಡ ಪುಸ್ತಕಗಳ ಗ್ರಂಥಾಲಯ ಇರಬೇಕು ಎಂದರು.
ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ಮಾತನಾಡಿ, ಅಕಾಡೆಮಿಯಲ್ಲಿ ನೃತ್ಯದೊಂದಿಗೆ ಮಕ್ಕಳಿಗೆ ಕನ್ನಡವನ್ನೂ ಕಲಿಸಲಾಗುತ್ತಿದೆ. ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.