ಬಸವಕಲ್ಯಾಣ: ‘ಅಕ್ಕ ಮಹಾದೇವಿ ಶರಣೆ ಮಾತ್ರವಲ್ಲ, ಧೈರ್ಯದ ಪ್ರತೀಕ’ ಎಂದು ಶರಣ ಹರಳಯ್ಯ ಗವಿಯ ಡಾ.ಗಂಗಾಂಬಿಕಾ ಅಕ್ಕ ಹೇಳಿದರು.
ನಗರದ ಬಂದವರ ಓಣಿಯಲ್ಲಿ ಅಂತರರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಕ್ಕಮಹಾದೇವಿ ಅನುಭಾವ ಪೀಠದಿಂದ ಈಚೆಗೆ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಕ್ಕನ ಸಂದೇಶ ಹಾಗೂ ಆದರ್ಶದ ಪಾಲನೆಯಿಂದ ಜೀವನದಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ. ಬದುಕಿನಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಶಕ್ತಿ ಬರುತ್ತದೆ. ಒಬ್ಬ ರಾಜನನ್ನು ಎದುರಿಸಿ ಅಕ್ಕ ಕಲ್ಯಾಣ ನಾಡಿಗೆ ಬಂದರು. ಇದು ಅವರಲ್ಲಿನ ಅಪಾರ ಆತ್ಮವಿಶ್ವಾಸ ತೋರಿಸುತ್ತದೆ. ಸ್ತ್ರೀ ಅಬಲೆಯಲ್ಲ ಸಬಲೆ, ಮಹಾಶಕ್ತಿವಂತೆ ಎನ್ನುವುದನ್ನು ತೋರಿಸುತ್ತದೆ’ ಎಂದರು.
ಶರಣೆ ಗಾಯತ್ರಿತಾಯಿ ಮಾತನಾಡಿ, ‘ಮಹಿಳೆ ಸಹ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಬಹುದು ಎಂಬುದನ್ನು ಅಕ್ಕಮಹಾದೇವಿ ತೋರಿಸಿಕೊಟ್ಟರು' ಎಂದರು.
ಬಸವೇಶ್ವರ ದೇವಸ್ಥಾನ ಪಂಚ ಸಮಿತಿ ನಿರ್ದೇಶಕಿ ವಿಜಯಲಕ್ಷ್ಮಿ ಗಡ್ಡೆ, ತಹಶೀಲ್ದಾರ್ ಸಾವಿತ್ರಿ ಸಲಗರ, ಸತ್ಯಕ್ಕತಾಯಿ, ಶ್ರೀದೇವಿ ಕಾಕನಾಳೆ, ಜಯಶ್ರೀ ಬಿರಾದಾರ, ಕಲ್ಯಾಣಮ್ಮ ಮಾತನಾಡಿದರು.