ಹುಲಸೂರ: ‘ಡಾ.ಬಿ.ಆರ್.ಅಂಬೇಡ್ಕರ್ ಎಲ್ಲ ಕಾಲದ ಅರಿವು. ಅವರ ಬರಹ ಪ್ರಜ್ಞೆಯ ಬಹುದೊಡ್ಡ ರೂಪ’ ಎಂದು ಉಪನ್ಯಾಸಕ ಡಾ.ಭೀಮಾಶಂಕರ ಬಿರಾದಾರ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಎಂಕೆಕೆಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ನಡೆದ ‘ಅಂಬೇಡ್ಕರ್ ಓದು’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ಬಹುದೊಡ್ಡ ಬೌದ್ಧಿಕ ಮತ್ತು ವೈಚಾರಿಕ ವ್ಯಕ್ತಿತ್ವವಾಗಿದ್ದರು ಎಂದು ಹೇಳಿದರು.
ಬಾಬಾ ಸಾಹೇಬರು ಭಾರತೀಯ ಸಂವಿಧಾನದ ಮೂಲಕ ಸಾಮಾಜಿಕ, ರಾಜಕೀಯ ಹಾಗೂ ಆಡಳಿತಾತ್ಮಕ ಸಂಗತಿಗಳನ್ನು ನಿರೂಪಿಸುತ್ತಲೇ ಭಾರತದ ಬಹುತ್ವದ ಮಹತ್ವವನ್ನು ತಿಳಿಸುತ್ತಾರೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅರುಣ್ ಜೋಳದಕೂಡ್ಲಿಗಿ ಅವರು ಯುಟ್ಯೂಬ್ನಲ್ಲಿ ನಡೆಸುವ ಅಂಬೇಡ್ಕರ್ ಓದು ಹೊಸ ದಾಖಲೆ ಬರೆದಿದೆ ಎಂದರು.
ತಹಶೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ,‘ಡಾ.ಬಿ.ಆರ್.ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದರು. ಅವರನ್ನು ವಿಶ್ವ, ಜ್ಞಾನದ ಸಂಕೇತವಾಗಿ ಗುರುತಿಸಿದೆ. ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ ನಾಶ ಮಾಡುವ ಜವಾಬ್ದಾರಿ ಇಂದಿನ ಯುವಕರ ಮೇಲಿದೆ’ ಎಂದುಹೇಳಿದರು.
ತಾ.ಪಂ. ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಲತಾ ಎಸ್.ಹಾರಕೂಡೆ, ತಾಲ್ಲೂಕು ರಚನೆ ಹೋರಾಟ ಸಮಿತಿ ಸಂಚಾಲಕ ಎಂ.ಜಿ.ರಾಜೋಳೆ ಮಾತನಾಡಿದರು.
ಕಾರ್ಯಕ್ರಮದ ಅಂಗವಾಗಿ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಕುರಿತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ, ಆಶು ಭಾಷಣ, ಕವನ ವಾಚನ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬಳಿಕ ಬಹುಮಾನ ವಿತರಿಸಲಾಯಿತು.