ಬೀದರ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಬುಧವಾರ ಆರಂಭಿಸಿದ್ದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಅಧಿಕಾರಿ ಭರವಸೆ ಮೇರೆಗೆ ಅಂಗನವಾಡಿ ನೌಕರರು ಹಿಂಪಡೆದರು.
ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಮೈಲೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ ಎದುರು ಬೆಳಿಗ್ಗೆ ಧರಣಿ ಆರಂಭಿಸಿದರು. ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಉಪ ನಿರ್ದೇಶಕ ಪ್ರಭಾಕರ ಅವರು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ನಂತರ ನೌಕರರು ಧರಣಿ ಕೈಬಿಟ್ಟರು.
ಅಂಗನವಾಡಿ ಕೇಂದ್ರಗಳ ಒಂದೂವರೆ ವರ್ಷದ ಬಾಕಿ ಬಾಡಿಗೆ, ತರಕಾರಿ ಹಣ ಬಿಡುಗಡೆಗೊಳಿಸಬೇಕು. ಗುಣಮಟ್ಟದ ಆಹಾರ ಧಾನ್ಯ, ಮೊಟ್ಟೆ ಪೂರೈಸಬೇಕು. ಪೀಠೋಪಕರಣ, ಒಲೆ, ರೆಗ್ಯುಲೇಟರ್, ತೂಕದ ಯಂತ್ರ, ರಿಜಿಸ್ಟರ್ಗಳನ್ನು ಪೂರೈಸಬೇಕು. ಎಲ್ಲ ವಲಯಗಳ ಮೇಲ್ವಿಚಾರಕ ಹುದ್ದೆ ಭರ್ತಿ ಮಾಡಬೇಕು. ಸೋರುತ್ತಿರುವ ಕೇಂದ್ರಗಳನ್ನು ದುರಸ್ತಿಪಡಿಸಬೇಕು. ದೀರ್ಘಕಾಲದಿಂದ ಒಂದೇ ಕಡೆ ಇರುವ ಮೇಲ್ವಿಚಾರಕಿಯರನ್ನು ವರ್ಗಾವಣೆ ಮಾಡಬೇಕು. ಎಸ್ಸೆಸ್ಸೆಲ್ಸಿ ಪೂರೈಸಿದ ಕಾರ್ಯಕರ್ತೆಯರಿಗೆ ಮುಂಬಡ್ತಿ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಇಟ್ಟುಕೊಂಡು ನೌಕರರು ಧರಣಿ ನಡೆಸುತ್ತಿದ್ದರು.
ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಮಹೇಶ ನಾಡಗೌಡ, ಅಧ್ಯಕ್ಷೆ ಲಕ್ಷ್ಮಿ ದಂಡಿ, ಕಾರ್ಯದರ್ಶಿ ಬಸಮ್ಮ ಮೇತ್ರಿ ಮುಂದಾಳತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.