ಕಲಬುರ್ಗಿಯಿಂದ 1999 ರಿಂದ 2009 ರ ವರೆಗೆ ಇಕ್ಬಾಲ್ ಅಹಮ್ಮದ್ ಸರಡಗಿ ಅವರನ್ನು ಸಂಸದರನ್ನಾಗಿ ಮಾಡಿದ್ದು ಖರ್ಗೆ. ಈ ಅವಧಿಯಲ್ಲಿ ಸರಡಗಿಗೆ ಆಲ್ ಇಂಡಿಯಾ ಹಜ್ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಅವಕಾಶ ಕೊಡಿಸಿದ್ದರು. 2013-14 ರಲ್ಲಿ ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಕೂಡ ಕೊಡಿಸಿದ್ದರು. ಆದರೆ, ಕೇಂದ್ರ ಸಚಿವಾಲಯದ ಕೆಲಸದ ನಿಮಿತ್ತ ಅವರು ಜಿನಿವಾಕ್ಕೆ ಹೋಗಿದ್ದಾಗ ನಡೆದ ಚುನಾವಣೆಯಲ್ಲಿ ಅನಿವಾರ್ಯ ಕಾರಣಗಳಿಂದ ಸರಡಗಿಗೆ ಸೋಲು ಉಂಟಾಯಿತು. ಆದರೆ, ಖರ್ಗೆ ಅವರು ವಿದೇಶದಿಂದ ಮರಳಿದ ನಂತರ ಹಠ ಬಿಡದೆ ಸರಡಗಿ ಅವರನ್ನು ಮತ್ತೆ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಿಸಿದ್ದರು. ಬಳ್ಳಾರಿಯ ಡಾ. ನಾಸೀರ್ ಹುಸೇನ್ ಅವರನ್ನು 2018 ರಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡುವುದಕ್ಕೂ ಕಾರಣರಾಗಿದ್ದರು. ಖರ್ಗೆ ಅವರ ಜನಪರ ಕಾರ್ಯಗಳು ಓವೈಶಿಗೆ ತಿಳಿದಿಲ್ಲವೋ ಅಥವಾ ಗೊತ್ತಿದ್ದೂ ಉದ್ದೇಶಪೂರ್ವಕವಾಗಿಯೇ ಈ ರೀತಿ ಹೇಳಿಕೆ ನೀಡಿದ್ದಾರೋ ಅರ್ಥವಾಗುತ್ತಿಲ್ಲ ಎಂದು ಹೇಳಿದ್ದಾರೆ.