ಭಾಲ್ಕಿ: ವಿಶ್ವಗುರು ಬಸವಣ್ಣನವರ ತತ್ವಗಳು, ವಿಚಾರಧಾರೆ ವಿಶ್ವಮಾನ್ಯ ಆಗಿವೆ. ಆದರೆ, ಅವರ ತತ್ವಗಳು ನಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನದಲ್ಲಿ ತಂದಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಟೌನ್ಹಾಲ್ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ಪುರಸಭೆ ವತಿಯಿಂದ ಮಂಗಳ ವಾರ ಆಯೋಜಿಸಿದ್ದ ಬಸವಣ್ಣನವರ 889ನೇ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ಜಯಂತಿ ಇದೊಂದು ಮಾನವೀಯ ಮೌಲ್ಯದ ಜಯಂತಿ ಆಗಿದೆ. ಬಸವಣ್ಣನವರ ಜನಪರ, ಜೀವಪರ ಕಾರ್ಯಗಳು ನಮ್ಮೆಲ್ಲರಿಗೂ ಮಾದರಿಯಾಗಿವೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ವೀರಶೆಟ್ಟಿ ಬಾವುಗೆ ಅವರು ಉಪನ್ಯಾಸ ನೀಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಾದ ಕಲ್ಪನಾ ಸುಭಾಷ, ಯೋಗೇಶ ಸುಭಾಷ, ಸುಧಾ ಮಲ್ಲಪ್ಪ ಮತ್ತು ಸುಪ್ರಿಯಾ ಅವರನ್ನು ಈಶ್ವರ ಖಂಡ್ರೆ ಅವರು ಸನ್ಮಾನಿಸಿ, ನಗದು ಪ್ರೋತ್ಸಾಹ ಧನ ವಿತರಿಸಿದರು.
ತಹಶೀಲ್ದಾರ್ ಕೀರ್ತಿ ಚಾಲಕ್ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.
ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಸದಸ್ಯ ಅನಿಲ್ ಸುಂಟೆ, ಓಂಕಾರ ಮೋರೆ, ಅರ್ಬನ್ ಬ್ಯಾಂಕ್ ಅಧ್ಯಕ್ಷ ವಿಲಾಸ ಬಕ್ಕಾ, ಡಿವೈಎಸ್ಪಿ ಪ್ರತ್ವೀಕ ಶಂಕರ್, ಪುರಸಭೆ ಮುಖ್ಯಾಧಿಕಾರಿ ಸ್ವಾಮಿದಾಸ್ ಇದ್ದರು.