ಬಸವಕಲ್ಯಾಣ (ಬೀದರ್ ಜಿಲ್ಲೆ):ಈ ಕ್ಷೇತ್ರದ ಉಪ ಚುನಾವಣೆಗೆ ಹಿಂದುಸ್ತಾನ್ ಜನತಾ ಪಕ್ಷದಿಂದ ಬುಧವಾರ ನಾಮಪತ್ರ ಸಲ್ಲಿಸಿರುವ ವಿಜಯಪುರ ಜಿಲ್ಲೆ ಬರಡೋಲದ ವೆಂಕಟೇಶ್ವರ ಸ್ವಾಮೀಜಿ ತಮ್ಮ ಬಳಿ ₹35.87 ಕೋಟಿ ಮೌಲ್ಯದ 45 ಕೆ.ಜಿ ಚಿನ್ನ ಇರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಆದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದ್ದು, ಅದರಲ್ಲಿ ವಾರ್ಷಿಕ ಆದಾಯ ಶೂನ್ಯ ಎಂದೂ ನಮೂದಿಸಿದ್ದಾರೆ!
ಧಾರವಾಡದಲ್ಲಿ ಬಿ.ಕಾಂ ಓದಿರುವ ಇವರು ಈ ವರೆಗೆ 25 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದು ಈಗ 26ನೇ ಸಲ ನಾಮಪತ್ರ ಸಲ್ಲಿಸಿದ್ದಾರೆ. ಪತ್ನಿ ಕವಿತಾ ಬಳಿ ₹23 ಲಕ್ಷದ ಚಿನ್ನ ಹಾಗೂ ₹4 ಲಕ್ಷ ಮೌಲ್ಯದ ಬೆಳ್ಳಿ ಆಭರಣಗಳಿವೆ.ಒಟ್ಟು ₹58.37 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹1 ಕೋಟಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದೂ ಅವರು ಉಲ್ಲೇಖಿಸಿದ್ದಾರೆ.
ಆಲ್ ಇಂಡಿಯಾ ಮುಸ್ಲಿಂ ಲೀಗ್ (ಸೆಕ್ಯುಲರ್) ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕಲಬುರ್ಗಿಯ ಫರ್ಜಾನಾ ಬೇಗಂ ಬಳಿ 50 ಗ್ರಾಂ ಚಿನ್ನ ಹಾಗೂ 500 ಗ್ರಾಂ ಬೆಳ್ಳಿ ಆಭರಣ ಒಳಗೊಂಡು ಒಟ್ಟು ₹2.83 ಲಕ್ಷ ಮೌಲ್ಯದ ಆಭರಣಗಳಿವೆ.