ಬೀದರ್: ಪಶು ಸಂಗೋಪನೆ, ಹಜ್ ಹಾಗೂ ವಕ್ಫ್ ಸಚಿವ ಪ್ರಭು ಚವಾಣ್ ಅವರಿಗೆ ಕೋವಿಡ್ ದೃಢಪಟ್ಟಿದ್ದು, ಸಚಿವರ ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಬೇಕು ಮತ್ತು ತಪಾಸಣೆಗೆ ಒಳಗಾಗಬೇಕು ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ತಿಳಿಸಿದ್ದಾರೆ.
ಸೆ.8 ರಂದು ಚವಾಣ್ ಅವರ ಕಾರು ಚಾಲಕ, ಗನ್ ಮ್ಯಾನ್, ಆಪ್ತ ಸಹಾಯಕರಿಗೆ ಪಾಸಿಟಿವ್ ಬಂದ ಕಾರಣ ಕ್ವಾರಂಟೈನ್ಗೆ ಒಳಗಾಗಿದ್ದರು. ಬುಧವಾರ ಸಚಿವ ಗಂಟಲು ದ್ರವದ ಮಾದರಿ ಪ್ರರೀಕ್ಷೆಗೆ ಕಳಿಸಲಾಗಿತ್ತು. ಗುರುವಾರ ವರದಿ ಪಾಸಿಟಿವ್ ಬಂದಿದೆ.
ಕೋವಿಡ್ ನಿಯಂತ್ರಣ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಸಂಬಂಧ ಸಚಿವ ಚವಾಣ್ ಅವರು ಐದು ತಿಂಗಳಿಂದ ನಿರಂತರ ಸಂಚರಿಸುತ್ತಿದ್ದಾರೆ. ರಾಜ್ಯದ 16ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಸರಣಿ ಸಭೆಗಳನ್ನು ನಡೆಸಿದ್ದಾರೆ. ಬೆಂಗಳೂರಿನಲ್ಲಿ ಸರ್ಕಾರದ ಮಟ್ಟದಲ್ಲಿ ನಡೆದ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಭ ಸೋಂಕು ತಗಲಿರಬಹುದು ಎಂದು ಸಚಿವರ ಆಪ್ತರು ತಿಳಿಸಿದ್ದಾರೆ.
ಚವಾಣ್ ಗುರುವಾರ ಔರಾದ್ನ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಂಡರು. ತಾಲ್ಲೂಕು ವೈದ್ಯಾಧಿಕಾರಿ ಶರಣಯ್ಯ ಸ್ವಾಮಿ, ಮುಖ್ಯ ವೈದ್ಯಾಧಿಕಾರಿ ಮಹೇಶ ಬಿರಾದಾರ, ತಜ್ಞ ವೈದ್ಯ ಡಾ.ಕಿರಣ್ ಗಾಯಕವಾಡ, ಡಾ.ಪ್ರಮೋದ, ಡಾ.ಸಂತೋಷ ಬುಟ್ಟೆ ಇದ್ದರು.
‘ಸಚಿವರಲ್ಲಿ ಕೋವಿಡ್ ಲಕ್ಷಣಗಳು ಕಾಣಿಸಿಲ್ಲ. ಔರಾದ್ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದು, ವೈದ್ಯರ ಸಲಹೆಯಂತೆ ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯಲಿದ್ದಾರೆ.ಆರೋಗ್ಯವಾಗಿ ಇದ್ದೇನೆ.ಶೀಘ್ರ ಸೋಂಕಿನಿಂದ ಗುಣಮುಖನಾಗಿ ಬರುತ್ತೇನೆ. ಯಾರೂ ಆಂತಕ ಪಡಬೇಕಿಲ್ಲವೆಂದು ಹೇಳಿದ್ದಾರೆ’ ಎಂದು ಶಿವಕುಮಾರ ಕಟ್ಟೆ ತಿಳಿಸಿದ್ದಾರೆ.