ಬಸವಕಲ್ಯಾಣ: ತಾಲ್ಲೂಕಿನ ಮುಚಳಂಬದ ನಾಗಭೂಷಣ ಶಿವಯೋಗಿ ಗುರುಕುಲ ಪ್ರೌಢಶಾಲೆಯು ವ್ಯಕ್ತಿತ್ವ ವಿಕಸನದ ಕೇಂದ್ರವಾಗಿದೆ. ಯೋಗಾಭ್ಯಾಸ ನಿರಂತರವಾಗಿ ನಡೆಯುತ್ತದೆ. ವಾರಕ್ಕೊಮ್ಮೆ ಗಣ್ಯರಿಂದ ವ್ಯಕ್ತಿತ್ವ ವಿಕಸನದ, ಸಂಸ್ಕಾರ ಕಲಿಸುವ ಬೋಧನೆ ಆಯೋಜಿಸಲಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಒಂದು ಗಂಟೆ ಕಾಲ ಯೋಗಾಭ್ಯಾಸದ ನಂತರ ತರಗತಿಗಳು ಆರಂಭಗೊಳ್ಳುತ್ತವೆ. ಪ್ರತಿ ಸೋಮವಾರ ಸಂಸ್ಥೆ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ವ್ಯಕ್ತಿತ್ವ ವಿಕಸನದ ಪಾಠ ಹೇಳುತ್ತಾರೆ. ಡಿಸೆಂಬರ್- ಜನವರಿ ತಿಂಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ.
`50 ವರ್ಷಗಳ ಹಿಂದೆ ಇಲ್ಲಿ ಯೋಗ ಗುರು ನಾಗಭೂಷಣ ಶಿವಯೋಗಿಗಳು ಯೋಗಾಸನ ತರಬೇತಿ ನೀಡುತ್ತಿದ್ದರು. ಹಾಗೂ ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆದಿದ್ದರು. ಅವರ ನಂತರ ಮಠದ ಟ್ರಸ್ಟ್ನಿಂದ ಆರಂಭಿಸಿದ ಈ ಸಂಸ್ಥೆಯಲ್ಲಿಯೂ ಯೋಗ ಸಾಧನೆಗೆ ಮೊದಲ ಆದ್ಯತೆ ನೀಡಲಾಗಿದೆ. ಶೈಕ್ಷಣಿಕ ಸೌಲಭ್ಯ ಜತೆಗೆ ಬಡ ಮಕ್ಕಳಿಗೆ ಊಟ, ವಸತಿಯ ಕಲ್ಪಿಸಲಾಗಿದೆ’ ಎನ್ನುತ್ತಾರೆ ಸಂಸ್ಥೆ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ.
`ವಿದ್ಯಾರ್ಥಿ ವೀರೇಶ ದೇಶಮುಖ ಪ್ರಸಕ್ತ ಸಾಲಿನ ಪ್ರತಿಭಾ ಕಾರಂಜಿಯ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾನೆ. ಸಂಸ್ಥೆ ಆರಂಭಗೊಂಡು 20 ವರ್ಷಗಳಾದರೂ, ಎಸ್ಸೆಸ್ಸೆಲ್ಸಿ ತರಗತಿ ಆರಂಭವಾಗಿ 11 ವರ್ಷಗಳಾಗುತ್ತಿದ್ದು, ಆರು ಸಲ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳು ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಕಮ್ಮಿಯಿಲ್ಲ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ’ ಎಂದು ಮುಖ್ಯ ಶಿಕ್ಷಕ ರವಿ ಗೌಡಗಾಂವ.
‘ವರ್ಷಕ್ಕೊಮ್ಮೆ ವಿಜ್ಞಾನ ವಸ್ತುಪ್ರದರ್ಶನ ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳು ವಿಜ್ಞಾನದ ಪ್ರಯೋ ಗಗಳನ್ನು ಪ್ರದರ್ಶಿಸುತ್ತಾರೆ. ಮಕ್ಕಳು ಸಿದ್ಧಪಡಿಸಿದ ಕರಕುಶಲ ವಸ್ತುಗಳನ್ನು ಕೂಡ ಇಡಲಾಗುತ್ತದೆ’ ಎನ್ನುತ್ತಾರೆ ಶಿಕ್ಷಕ ಜಗದೀಶ ಸ್ವಾಮಿ.
‘ಪ್ರತಿ ರಾಷ್ಟ್ರೀಯ ಹಬ್ಬದಂದು ಆಟೋಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರದರ್ಶಿಸಲಾಗುತ್ತದೆ. ಪ್ರತಿ ದಿನವೂ ಮಕ್ಕಳಿಗೆ ಆಟಗಳನ್ನು ಆಡಿಸಲಾಗುತ್ತದೆ. ಇಲ್ಲಿನ ಕಬಡ್ಡಿ ಹಾಗೂ ವಾಲಿಬಾಲ್ ತಂಡಗಳು ತಾಲ್ಲೂಕು ಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡಿದ್ದವು. ಥ್ರೋಬಾಲ್ ಸ್ಪರ್ಧೆಯಲ್ಲಿ ಆದಮ್ ತಾಲ್ಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದರೆ, ಬಸವರಾಜ, ವಿಜಯ, ಅಭಿಷೇಕ, ದತ್ತಾತ್ರಿ, ಅಂಬರೀಶ್, ಅಮರ ಮುಂತಾದವರು ವಿವಿಧ ಕ್ರೀಡೆಗಳಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಗೊಂಡಿದ್ದರು’ ಎನ್ನುತ್ತಾರೆ ದೈಹಿಕ ಶಿಕ್ಷಕ ಮಲ್ಲಿನಾಥ ಮೇತ್ರಿ, ರೇವಣಸಿದ್ದಪ್ಪ ಹಿರೇಮಠ.
‘ಸಂಸ್ಕಾರ, ಸಂಸ್ಕೃತಿ ಕಲಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಸಂಸ್ಥೆ ಪ್ರಾಧ್ಯಾನ್ಯತೆ ನೀಡಿದೆ. ಇಲ್ಲಿನ ಪ್ರತಿ ರಾಷ್ಟ್ರೀಯ ಹಬ್ಬ ಹಾಗೂ ವಾರ್ಷಿಕ ಸ್ನೇಹ ಸಮ್ಮೇಲನದಲ್ಲಿನ ನಾಟಕ, ನೃತ್ಯ ಹಾಗೂ ವಿವಿಧ ಜಾನಪದ ಕಲೆಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಪ್ರದರ್ಶಿ ಸುತ್ತಾರೆ. ಇದನ್ನು ನೋಡುವುದಕ್ಕೆ ಗ್ರಾಮಸ್ಥರು ಅತ್ಯಧಿಕ ಸಂಖ್ಯೆಯಲ್ಲಿ ಬರುತ್ತಾರೆ’ ಎಂಬುದು ಗ್ರಾಮಸ್ಥ ಶಾಂತಕುಮಾರ ಜ್ಯೋತೆಪ್ಪರ ಅನಿಸಿಕೆ.
*
ಐವತ್ತು ವರ್ಷಗಳ ಹಿಂದೆ ನಾಗಭೂಷಣ ಶಿವಯೋಗಿಗಳು ಯೋಗ, ಸಂಸ್ಕಾರ ಕಲಿಸುತ್ತಿದ್ದರಿಂದ ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡಲಾಗುತ್ತಿದೆ.
-ಪ್ರಣವಾನಂದ ಸ್ವಾಮೀಜಿ ಸಂಸ್ಥೆ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.