ಬಸವಕಲ್ಯಾಣ: ಇಲ್ಲಿನ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೃಷ್ಣಾ ಗೋಣೆ ಅವರು ಸೋಮವಾರ ತಳ್ಳುವ ಗಾಡಿ ಹಿಡಿದು ಓಣಿಗಳಲ್ಲಿ ಸಂಚರಿಸಿ ತರಕಾರಿ ಮಾರಾಟ ಮಾಡಿದರು.
ಕೋವಿಡ್-19 ಸೋಂಕಿತ ಪತ್ತೆಯಾದ ನಂತರ ಐದು ದಿನಗಳಿಂದ ಪಟ್ಟಣದಾದ್ಯಂತ ಲಾಕ್ಡೌನ್ ಇದೆ. ಹೀಗಾಗಿ ಕಿರಾಣಿ, ತರಕಾರಿ ಮಾರಾಟದ ಅಂಗಡಿಗಳು ತೆರೆದಿಲ್ಲ. ಹೀಗಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ನಗರಸಭೆಯಿಂದ ತರಕಾರಿ ಮಾರಾಟಕ್ಕೆ ಕೆಲವರಿಗೆ ಅನುಮತಿ ನೀಡಿ ಅವರೊಂದಿಗೆ ನಗರಸಭೆ ಸಿಬ್ಬಂದಿಯನ್ನು ಕೂಡ ನೇಮಿಸಿದ್ದಾರೆ. ಆದರೂ ಜನರು ತರಕಾರಿ ಖರೀದಿಗೆ ಸಂಶಯ ಪಡುತ್ತಿದ್ದಾರೆ. ಆದ್ದರಿಂದ ಇವರು ತಳ್ಳುವ ಗಾಡಿ ಮೂಲಕ ಎಲ್ಲೆಡೆ ಹೋಗಿ ತರಕಾರಿ ನೀಡಿದರು.
‘ಗೊತ್ತಿಲ್ಲದವರಿಂದ ಜನರು ತರಕಾರಿ ಖರೀದಿಸುತ್ತಿಲ್ಲ. ಆದ್ದರಿಂದ ನಾನೇ ತಳ್ಳುಗಾಡಿಯೊಂದಿಗೆ ಹೋಗುತ್ತೇನೆ ಎಂದು ಪೌರಾಯುಕ್ತರಿಗೆ ಕೇಳಿಕೊಂಡಾಗ ಅವರು ಅನುಮತಿ ನೀಡಿದರು. ಆದ್ದರಿಂದ ತರಕಾರಿ ಮಾರಾಟ ಮಾಡಿದೆ’ ಎಂದು ಕೃಷ್ಣ ಗೋಣೆ ತಿಳಿಸಿದ್ದಾರೆ.