ಬೀದರ್: ‘ಸಾತ್ವಿಕ ಜೀವನ ನಡೆಸಿದ್ದ ನಾರಾಯಣಸ್ವಾಮಿ ಮೈಸೂರೆ ಉತ್ತಮ ಕೀರ್ತನಕಾರ ಹಾಗೂ ಪ್ರವಚನಕಾರರಾಗಿದ್ದರು’ ಎಂದು ಸಾಹಿತಿ ದೇಶಾಂಶ ಹುಡುಗಿ ಅಭಿಪ್ರಾಯಪಟ್ಟರು.
ನಗರದ ಸಪ್ನಾ ಮಲ್ಟಿಫ್ಲೆಕ್ಸ್ನಲ್ಲಿ ನಡೆದ ಅಂಬಾದಾಸ ಹಾಗೂ ಮಮತಾ ಅವರ ಮದುವೆ ಸಮಾರಂಭದಲ್ಲಿ ದಿ.ನಾರಾಯಣಸ್ವಾಮಿ ಅವರು ರಚಿಸಿದ ಭಕ್ತಿರಸ ಸಾಗರ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ನಾರಾಯಣಸ್ವಾಮಿ ಆಧ್ಯಾತ್ಮಿಕ ಜೀವಿಯಾಗಿದ್ದರು. ಅವರ ಮಕ್ಕಳು ಅವರು ರಚಿಸಿದ ಎಲ್ಲ ಕವನಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸಿರುವುದು ಶ್ಲಾಘನೀಯ’ ಎಂದು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್ ಚಿಮಕೋಡೆ ಮಾತನಾಡಿ,‘ಭಕ್ತಿರಸ ಸಾಗರ ಪುಸ್ತಕದಲ್ಲಿ ಆಧ್ಯಾತ್ಮಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕ ಓದಬೇಕು’ ಎಂದು ತಿಳಿಸಿದರು.
ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಎಸ್.ಬಿ.ಕುಚಬಾಳ, ಪಂಢರಿನಾಥ, ನಿರ್ಮಲಾದೇವಿ ಮೈಸೂರೆ, ಮುಖಂಡ ಅರುಣಕುಮಾರ, ರಾಜಾರಾಮ್ ಅಂಬಾಟೆ, ಪತ್ರಕರ್ತ ಮಾಳಪ್ಪ, ಮೊಹನ್ ಭಾಷಾ, ಸುರೇಶ, ಕೃಷ್ಣ ಹಾಗೂ ಮಾರ್ಕಂಡೇಶ್ವರ ಮೈಸೂರೆ ಇದ್ದರು.
ನರಸಿಂಹ ಮೈಸೂರೆ ಸ್ವಾಗತಿಸಿದರು. ಯಶವಂತ ಕುಚಬಾಳ ನಿರೂಪಿಸಿದರು. ನರೇಶ ಮೈಸೂರೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.