ಬೀದರ್: ‘ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜಿಸಲಾಗಿದೆ. ಮೂರು ತಿಂಗಳಲ್ಲಿ ಎಲ್ಲ ಘಟಕಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು’ ಎಂದು ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜರತನ್ ಅಂಬೇಡ್ಕರ್ ಹೇಳಿದರು.
‘1977 ರಿಂದ 2015ರವರೆಗೂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಹಳೆಯ ಸಮಿತಿ ವಿಸರ್ಜಿಸಿ ರಾಷ್ಟ್ರ ಮಟ್ಟದಲ್ಲಿ ಹೊಸ ಸಮತಿ ರಚಿಸಲಾಗಿದೆ’ ಎಂದು ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
‘ಬಾಬಾ ಸಾಹೇಬ ಅಂಬೇಡ್ಕರ್ ತತ್ವದಡಿ ಸಾಗಿರುವ ಬುದ್ಧಿಸ್ಟ್ ಸೊಸೈಟಿಯ ನಿಯಮಗಳನ್ನು ಪದಾಧಿಕಾರಿಗಳಿಗೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಲಾಗುವುದು. ಅದರ ಧ್ಯೇಯ ಉದ್ದೇಶ ವಿವರಿಸಲಾಗುವುದು. ಬಾಬಾಸಾಹೇಬರ ತತ್ವ, ಸಿದ್ಧಾಂತವನ್ನು ಒಪ್ಪಿಕೊಂಡವರು ಸಮಿತಿಯಲ್ಲಿ ಮುಂದುವರಿಯಬಹುದು’ ಎಂದು ಹೇಳಿದರು.
‘ಈವರೆಗೂ ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸಂಸ್ಥೆಯನ್ನು ನೋಂದಣಿ ಮಾಡಿಕೊಳ್ಳದವರು ನೋಂದಣಿ ಮಾಡಿಕೊಳ್ಳಬೇಕು. ಬುದ್ಧಿಸ್ಟ್ ಸೊಸೈಟಿಯ ಆಸ್ತಿ ಪ್ರಧಾನ ಕಚೇರಿಯ ಅಧೀನಕ್ಕೆ ಒಳಪಡಲಿದೆ. ಇದಕ್ಕೂ ಮೊದಲು ಆರ್ಟಿಐ ಅರ್ಜಿ ಸಲ್ಲಿಸಿ ನಿಖರ ಮಾಹಿತಿ ಪಡೆಯಲಾಗುವುದು. ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದರು.