ಔರಾದ್ (ಬೀದರ್ ಜಿಲ್ಲೆ): ಎಲೆಕೋಸು ಬೆಳೆದು ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ತಾಲ್ಲೂಕಿನ ಬೋರಾಳ ಗ್ರಾಮದ ರೈತ ಸಂಜಯ ಪಾಟೀಲ ಅವರು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಅವರು ಬೆಳೆದಿದ್ದ ಎಲೆಕೋಸು ಮಾರಾಟವಾಗದೆ ಹೊಲದಲ್ಲೇ ಕೊಳೆಯುತ್ತಿದೆ.
‘ಮಹಾರಾಷ್ಟ್ರದಿಂದ ಸಸಿ ತಂದಿದ್ದು, ₹1 ಲಕ್ಷ ಹಣ ಖರ್ಚು ಮಾಡಿದ್ದೆ. ಉತ್ತಮ ಇಳುವರಿ ಬಂದಿದೆ. ₹4 ರಿಂದ ₹ 5 ಲಕ್ಷ ಆದಾಯ ನಿರೀಕ್ಷೆ ಇತ್ತು. ಈಗ ಬೇಡಿಕೆ ಕುಸಿದಿದೆ.’ ಎಂದು ಸಂಜಯ ಪಾಟೀಲ ತಿಳಿಸಿದರು.
‘ಒಂದು ಎಕರೆಯಲ್ಲಿ ಬೆಳೆದ ಬೆಂಡೆಕಾಯಿ, ಬದನೆಕಾಯಿಯ ಉತ್ತಮ ಇಳುವರಿ ಬಂದಿದೆ. ಆದರೆ, ಲಾಕ್ಡೌನ್ ಕಾರಣ ಮದುವೆಗಳು ನಡೆಯುತ್ತಿಲ್ಲ. ಹೋಟೆಲ್ಗಳು ಮುಚ್ಚಿವೆ. ₹10ಕ್ಕೆ ಕೆ.ಜಿಯಂತೆ ಎಲೆಕೋಸು ಕೊಟ್ಟರೂ ಜನರು ಖರೀದಿಸುತ್ತಿಲ್ಲ. ಈಗ ಜಾನುವಾರುಗಳಿಗೆ ತಿನ್ನಲು ಹಾಕುತ್ತಿದ್ದೇವೆ’ ಎಂದರು.
‘ಸಂಜಯ ಪಾಟೀಲ ಅವರು ಸಮಸ್ಯೆಗೆ ಸಿಲುಕಿರುವುದನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಎಂ.ಡಿ.ಹರ್ಷದ್ ತಿಳಿಸಿದ್ದಾರೆ.