ಜನವಾಡ: ಚಲಿಸುತ್ತಿದ್ದ ವೇಳೆ ಏಂಜಿನ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತು ಉರಿದ ಘಟನೆ ಬೀದರ್-ಭಾಲ್ಕಿ ಮುಖ್ಯ ರಸ್ತೆಯಲ್ಲಿ ಇರುವ ಬೀದರ್ ತಾಲ್ಲೂಕಿನ ಹೊನ್ನಿಕೇರಿ ಕ್ರಾಸ್ ಸಮೀಪ ಸಂಭವಿಸಿದೆ.
ಕಾರು ಮಾಲೀಕ ನೌಬಾದ್ನ ಆಟೊನಗರದಲ್ಲಿ ಕಾರು ಸರ್ವಿಸಿಂಗ್ ಮಾಡಿಸಿಕೊಂಡು, ಭಾಲ್ಕಿ ಕಡೆಗೆ ಹೊರಟಿದ್ದಾಗ, ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿತು. ತಕ್ಷಣ ಕಾರು ನಿಲ್ಲಿಸಿ, ಅದರೊಳಗೆ ಇದ್ದ ನಾಲ್ವರು ಕೆಳಗಿಳಿದರು. ಎಂಜಿನ್ ಧಗ ಧಗನೆ ಹೊತ್ತು ಉರಿಯಿತು. ಘಟನೆಯಲ್ಲಿ ಕಾರು ಬಹುತೇಕ ಸುಟ್ಟು ಹೋಗಿದೆ.
ಘಟನೆಯಿಂದಾಗಿ ಮುಖ್ಯ ರಸ್ತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ದೂರದಲ್ಲೇ ನಿಂತುಕೊಂಡವು. ಪ್ರಯಾಣಿಕರು ತಮ್ಮ ಮೊಬೈಲ್ನಲ್ಲಿ ಕಾರು ಹೊತ್ತು ಉರಿಯುತ್ತಿದ್ದ ದೃಶ್ಯ ಚಿತ್ರೀಕರಿಸಿಕೊಂಡರು. ಜನವಾಡ ಪೊಲೀಸ್ ಠಾಣೆ ಪಿಎಸ್ಐ ಶಿವರಾಜ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಘಟನೆ ಬುಧವಾರ ನಡೆದಿದೆ. ಅನೇಕ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಗುರುವಾರವೂ ಕಾರು ಹೊತ್ತು ಉರಿಯುತ್ತಿದ್ದ ವಿಡಿಯೊ ಹರಿದಾಡಿತು.