ಬೀದರ್: ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಜಿಲ್ಲಾ ರೆಡ್ಡಿ ಸಮಾಜ ತೀವ್ರವಾಗಿ ಖಂಡಿಸಿದೆ.
ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಸೌಮ್ಯ ರೆಡ್ಡಿ ವಿರುದ್ಧ ಹುಸಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ ಆರೋಪಿಸಿದ್ದಾರೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶಾಸಕಿಯನ್ನು ಭದ್ರತೆಯಲ್ಲಿದ್ದ ಮಹಿಳಾ ಪೊಲೀಸರೇ ಸೀರೆ, ಜುಟ್ಟು ಹಿಡಿದು ಎಳೆದಾಡಿದ್ದಾರೆ. ಅನುಚಿತವಾಗಿ ವರ್ತಿಸಿದ್ದಾರೆ. ಆದರೆ, ಅದನ್ನು ಮರೆಮಾಚಿಸಲು ಸುಳ್ಳು ಆರೋಪ ಹೊರೆಸಿ ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿದ್ದಾರೆ.
ಕೋವಿಡ್ ಪ್ರಯುಕ್ತ ವಿಧಿಸಲಾಗಿದ್ದ ಲಾಕ್ಡೌನ್ ವೇಳೆ ಸಾವಿರಾರು ಜನರಿಗೆ ನೆರವಾಗುವ ಮೂಲಕ ಮಾದರಿ ಕೆಲಸ ಮಾಡಿದ್ದ ಸೌಮ್ಯ ರೆಡ್ಡಿ ದೇಶದ ಅತ್ಯುತ್ತಮ ಶಾಸಕಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ರೆಡ್ಡಿ ಸಮಾಜದ ಮಹಿಳೆಯ ರಾಜಕೀಯ ಏಳಿಗೆ ಸಹಿಸದೆ, ಅವರ ತೇಜೋವಧೆ ಮಾಡಲು ಹುಸಿ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ಅನಗತ್ಯವಾಗಿ ತೊಂದರೆ ಕೊಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಸೌಮ್ಯ ರೆಡ್ಡಿ ವಿರುದ್ಧದ ಪ್ರಕರಣವನ್ನು ಬೇಷರತ್ತಾಗಿ ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ರೆಡ್ಡಿ ಸಮಾಜದ ವತಿಯಿಂದ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.