ಹುಮನಾಬಾದ್: ರಾಜ್ಯ ಸರ್ಕಾರ ಟಿಪ್ಪು ಜಯಂತಿ ರದ್ದು ಪಡಿಸಿ, ಟಿಪ್ಪು ಕುರಿತ ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆದುಹಾಕಲು ಮುಂದಾಗಿರುವುದನ್ನು ಖಂಡಿಸಿ ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ಬಿಎಸ್ಪಿ ಕಾರ್ಯಕರ್ತರು ಧರಣಿ ನಡೆಸಿ ಗ್ರೇಡ್ –2 ತಹಶೀಲ್ದಾರ್ ಜೈಶ್ರೀ ಅವರಿಗೆ ಮನವಿ ಸಲ್ಲಿಸಿದರು.
ಬಹುಜನ ಸಮಾಜ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ವೈಜಿನಾಥ ಸಿಂಧೆ ಮಾತನಾಡಿ, ಹಜರತ್ ಟಿಪ್ಪು ಸುಲ್ತಾನ್ ಅಪ್ಪಟ ದೇಶ ಪ್ರೇಮಿ. ಆದರೆ, ಅವನ್ನು ಮತಾಂಧ ಎಂಬಂತೆ ಬಿಂಬಿಸುತ್ತಿರುವುದು ಸರಿಯಲ್ಲ ಎಂದರು.
ರಾಜ್ಯ ಸರ್ಕಾರ ಟಿಪ್ಪು ಕುರಿತ ಇತಿಹಾಸವನ್ನು ಪಠ್ಯ ಪುಸ್ತಕದಿಂದ ತೆಗೆದು ಹಾಕುವ ನಿರ್ಣಯವನ್ನು ಕೂಡಲೇ ಕೈಬಿಟ್ಟು ಟಿಪ್ಪು ಜಯಂತಿ ಸರ್ಕಾರದಿಂದ ಪುನರ್ ಆಚರಣೆ ಮಾಡುವಂತೆ ಆದೇಶಿಸಬೇಕು. ಇಲ್ಲದಿದ್ದರೆ ಬಿಎಸ್ಪಿ ವತಿಯಿಂದ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಬಿಎಸ್ಪಿ ಕಲಬುರ್ಗಿ ವಿಭಾಗೀಯ ಉಸ್ತುವಾರಿ ವಿಠಲ ನಾಯಕ ಡಾಕುಳಗಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಜಮೀಲ ಅಹಮದ್ ಖಾನ್, ಅಶೋಕ ಮಂಠಾಳಕರ್, ತಿಪ್ಪಣ್ಣಾ ವಾಲಿ, ಪ್ರಮುಖರಾದ ಹುಲೆಪ್ಪಾ ಬಾಳೊರೆ, ದತ್ತು ವರವಟ್ಟಿ, ಶಿವಾನಂದ ಕಟ್ಟಿಮನಿ, ಭಾರತ ಸಿಂಧೆ, ಡಾ.ದೇವೇಂದ್ರ ಗದ್ದಾರ್,ಅಲ್ತಾಫ, ಆಸ್ಕರ್ ಅವರು ಇದ್ದರು.