ಔರಾದ್: ಲಿಂ.ಚನ್ನಬಸವ ಪಟ್ಟದ್ದೇವರ ಶೈಕ್ಷಣಿಕ ಮತ್ತು ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿ ಎಂದು ವಿಶ್ವಭಾರತಿ ಸೇವಾ ಸಂಸ್ಥೆ ಅಧ್ಯಕ್ಷ ಪ್ರಭುಶೆಟ್ಟಿ ಸೈನಿಕಾರ ಹೇಳಿದರು.
ತಾಲ್ಲೂಕಿನ ಸಂತಪುರ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಸೋಮವಾರ ಲಿಂ.ಚನ್ನಬಸವ ಪಟ್ಟದ್ದೇವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
‘ನಿಜಾಮರ ಕಾಲದಲ್ಲಿ ಈ ಭಾಗದ ಜನ ಶೈಕ್ಷಣಿಕವಾಗಿ ವಂಚಿತರಾಗಿದ್ದರು. ಅನಾಥ ಮತ್ತು ಬಡ ಮಕ್ಕಳಿಗಾಗಿ ಸ್ವಂತ ಶಾಲೆ ತೆರೆದು ಅನ್ನ ಮತ್ತು ಅಕ್ಷರ ಜ್ಞಾನ ನೀಡಿದರು. ಮನೆ ಮನೆಗೆ ಭಿಕ್ಷೆ ಬೇಡಿ ಶಾಲಾ ಮಕ್ಕಳಿಗೆ ಅನ್ನ ಹಾಕಿದ ಅವರ ಸಾಮಾಜಿಕ ಕಳಕಳಿ ಮರೆಯಲಾಗದು’ ಎಂದರು.
ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಮಾತನಾಡಿ ‘ಲಿಂಗೈಕ್ಯ ಪಟ್ಟದ್ದೇವರು ಹಚ್ಚಿದ ಶಿಕ್ಷಣ ದೀಪ ಇಂದಿಗೂ ಬೆಳಗುತ್ತಿದೆ. ದೀಪದ ಬೆಳಕಿನಿಂದಲೇ ಸಾವಿರಾರು ಕುಟುಂಬಗಳ ಜ್ಯೋತಿ ಬೆಳಗಿದೆ’ ಎಂದು ತಿಳಿಸಿದರು.
ಇದೇ ವೇಳೆ ಪಟ್ಟದ್ದೇವರ ಕುರಿತು ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಯಶೋಧಾ ವಿಲಾಸ, ದಿಗಂಬರ ಗುಂಡಪ್ಪ, ಭಾಗ್ಯಶ್ರೀ ರಾಜಕುಮಾರ ಅವರಿಗೆ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.