ಬೀದರ್: ಸಣ್ಣ ಪ್ರಮಾಣದ ಎದೆ ನೋವು ಕಾಣಿಸಿಕೊಂಡರೂ ನಿರ್ಲಕ್ಷ್ಯ ತೋರಬಾರದು. ಕೂಡಲೇ ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಖ್ಯಾತ ಹೃದ್ರೋಗ ತಜ್ಞ ಡಾ. ಸಂಜೀವ್ ರೆಡ್ಡಿ ಸಲಹೆ ಮಾಡಿದರು.
ಎದೆ ನೋವಿಗೆ ಕೆಲವರು ಆ್ಯಸಿಡಿಟಿ ಎಂದು ಭಾವಿಸಿ ಮಾತ್ರೆ ತೆಗೆದುಕೊಂಡು ಸುಮ್ಮನಾಗುತ್ತಾರೆ. ಇದು ಬಹಳ ಅಪಾಯಕಾರಿ ಎಂದು ನಗರದ ಗುರುನಾನಕ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗುರುನಾನಕ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಎಂಜಿಯೋಪ್ಲಾಸ್ಟಿ ಚಿಕಿತ್ಸೆ ಆರಂಭಿಸಲಾಗಿದೆ. ಈವರೆಗೆ 1,500 ಎಂಜಿಯೋಪ್ಲಾಸ್ಟಿ ಚಿಕಿತ್ಸೆಗಳನ್ನು ಮಾಡಲಾಗಿದೆ. ಅದರಲ್ಲಿ ಶೇ 85 ರಷ್ಟು ಪ್ರಾಥಮಿಕ ಎಂಜಿಯೋಪ್ಲಾಸ್ಟಿಗಳು ಆಗಿವೆ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಎಂಜಿಯೋಪ್ಲಾಸ್ಟಿ ಉಚಿತವಾಗಿ ಮಾಡಲಾಗುತ್ತಿದೆ. ಚಿಕಿತ್ಸೆ ಮಾಡಿಸಿಕೊಂಡವರಲ್ಲಿ ಹೆಚ್ಚಿನವರು ಬಿಪಿಎಲ್ ಕಾರ್ಡ್ದಾರರೇ ಆಗಿದ್ದಾರೆ. ಎಲ್ಲ ಪ್ರಕರಣಗಳಲ್ಲೂ ಗುಣಮಟ್ಟದ ಸ್ಟಂಟ್ ಅಳವಡಿಸಲಾಗಿದೆ ಎಂದು ಹೇಳಿದರು.
ಗುರುನಾನಕ ಆಸ್ಪತ್ರೆಯು ಸುಸಜ್ಜಿತ ಹೃದ್ರೋಗ ವಿಭಾಗ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳನ್ನು ಹೊಂದಿದೆ. ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಹೃದ್ರೋಗಿಗಳ ಪ್ರಾಣ ರಕ್ಷಿಸುತ್ತಿದೆ. ಹೀಗಾಗಿ ರೋಗಿಗಳು ಚಿಕಿತ್ಸೆಗೆ ಬೇರೆ ರಾಜ್ಯಗಳಿಗೆ ಹೋಗುವುದು ತಪ್ಪಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ಸಿದ್ಧಲಿಂಗ, ಮಜರ್ ಹುಸೇನಿ ಇದ್ದರು.