ಬೀದರ್: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳೂರಲ್ಲಿ ಇರುವಾಗಲೇ ಮುಸ್ಲಿಮ ಯುವಕನ ಕೊಲೆಯಾಗಿದೆ. ಯುವಕನ ಕುಟುಂಬದವರನ್ನು ಭೇಟಿ ಮಾಡಬೇಕು ಎನ್ನುವ ಕನಿಷ್ಠ ಸೌಜನ್ಯ ಮುಖ್ಯಮಂತ್ರಿಗೆ ಬೇಡವೇ?’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಕಿಡಿ ಕಾರಿದರು.
‘ದಿನನಿತ್ಯ ಕೊಲೆಗಳು ನಡೆಯುತ್ತಿವೆ. ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಿದೆ. ಸರ್ಕಾರಕ್ಕೆ ಮಾಹಿತಿ ಕೊಡುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ. ಎಲ್ಲರೂ ಉಗಿಯುತ್ತಿದ್ದಾರೆ’ ಎಂದು ಹೇಳಿದರು.
‘ಕೇಶವ ಕೃಪಾ ಹಾಗೂ ಬಸವಕೃಪಾ ಹೊಡೆದಾಟ ಶುರುವಾಗಿದೆ. ಬಸವರಾಜ ಬೊಮ್ಮಾಯಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಗಿಸಲು ಬಿಜೆಪಿಯೊಳಗೇ ಷಡ್ಯಂತ್ರಗಳು ನಡೆದಿವೆ’ ಎಂದರು.
ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪುರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಪಾಟೀಲ ಸೋಲಪುರ ಇದ್ದರು.