ಕಮಲನಗರ: ತಾಲ್ಲೂಕಿನ ಡಿಗ್ಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಗ್ರಾಮ ಸಭೆ ನಡೆಯಿತು.
ಡಿಗ್ಗಿ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ರಿಲಯನ್ಸ್ ಔಟ್ರೀಚ್ ಸಂಸ್ಥೆ ವತಿಯಿಂದ ನಡೆದ ಸಭೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜ್ಞಾನೇಶ್ವರ ಹೋಳ್ಕರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು,‘ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳ ಕುರಿತ ಜ್ಞಾನದಿಂದ ವಂಚಿತರಾದರೆ ಭವಿಷ್ಯದಲ್ಲಿ ಅವರಿಗೆ ಲಭಿಸಬಹುದಾದ ಪ್ರಯೋಜನಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ ಮನೆಯಲ್ಲಿರುವ ಹಿರಿಯರು ಮತ್ತು ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ತಮ್ಮ ಪಾಲಿನ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸಬೇಕಾಗಿದೆ’ ಎಂದರು.
ಶಾಲೆಯ ಮುಖ್ಯಶಿಕ್ಷಕ ಧನರಾಜ ಮೇತ್ರೆ ಹಾಗೂ ಡಿಗ್ಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾರುತಿ ಪಾಟೀಲ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಸಂತೋಷ ವೈಜನಾಥ ಬನವಾಸೆ ಮಕ್ಕಳ ಹಕ್ಕುಗಳ ರಕ್ಷಣೆಯ ಮಹತ್ವದ ಕುರಿತು ಮಾಹಿತಿ ನೀಡಿದರು.
ಶಾಲೆಯಲ್ಲಿ ಕೋಣೆಗಳ ಕೊರತೆ, ಕುಡಿಯುವ ನೀರು, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಆಟದ ಮೈದಾನ, ಸುತ್ತುಗೋಡೆ, ಹೊಸ ಅಬಾದಿ ಮಕ್ಕಳಿಗೆ ಹೋಗಿ-ಬರಲು ಸೇತುವೆ, ಗೇಟ್ ಅಳವಡಿಸುವಿಕೆ ಹಾಗೂ ಕಂಪ್ಯೂಟರ್ ಸಮಸ್ಯೆ ಬಗೆಹರಿಸಲು ಮಕ್ಕಳು ಒತ್ತಾಯಿಸಿದರು.
ಸಿಆರ್ಪಿ ಎಂ.ಎಸ್.ಹಿರೇಮಠ, ಶಿಕ್ಷಕ ಸಂತೋಷ ಬಿರಾದಾರ, ಕುಲಾಲ ತೋರ್ಣೆಕರ್, ವಿಜಯಲಕ್ಷ್ಮೀ ಪಾಟೀಲ, ಆರತಿ ಶ್ರೀಧರ ಪಾಟೀಲ, ರೇಣುಕಾ ಮಾನೆ, ನೀಲಾಂಬಿಕಾ ರಾಜಕುಮಾರ, ಮಹೇಶ ಬಳತೆ, ಭೀಮರಾವ ಧಬಾಲೆ, ಗ್ರಾ.ಪಂ. ಸದಸ್ಯರು, ಶಾಲೆ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.