ಸುರಪುರ: ‘ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಪಾಲಕರು ಶ್ರಮಿಸಬೇಕು. ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು’ ಎಂದು ಶಿಶು ಅಭಿವೃದ್ಧಿ ಅಧಿಕಾರಿ ಲಾಲಸಾಬ ಪೀರಾಪುರ ಹೇಳಿದರು.
ತಾಲ್ಲೂಕಿನ ಬಾದ್ಯಾಪುರದಲ್ಲಿ ಶ್ರೀಗುರು ವಿದ್ಯಾ ಸಂಸ್ಥೆ, ಬಾಲಭವನ ಸೊಸೈಟಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ, ಗುರು ಪುಟ್ಟರಾಜ ಜನಕಲ್ಯಾಣ ಸೇವಾ ಸಮಿತಿ ಶನಿವಾರ ಏರ್ಪಡಿಸಿದ್ದ ವಾರಾಂತ್ಯ ಕಾರ್ಯಗಾರ ಉದ್ಟಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ದೊಡ್ಡಕೊತಲಪ್ಪ ಮಾತನಾಡಿ, ‘ಮಕ್ಕಳಲ್ಲಿ ಹೆಚ್ಚಾಗಿರುವ ವೊಬೈಲ್ ವ್ಯಾಮೋಹ ದಿನ ನಿತ್ಯದ ಚಟುವಟಿಕೆಗಳ ಮೇಲೆ ಪ್ರಭಾವ ಬೀರಿದೆ. ವೊಬೈಲ್ ಗೀಳನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ’ ಎಂದರು.
ಮುಖಂಡ ಧರ್ಮರಾಜ ಬಡಿಗೇರ ಮಾತನಾಡಿ ‘ಗ್ರಾಮೀಣ ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಿಸರ ಕಾಳಜಿ ಮುಂತಾದ ಚಿಂತನೆಗಳ ಬಗ್ಗೆ ಸೃಜನ್ಮಾತಕತೆಯನ್ನು ಹೆಚ್ಚಿಸಬೇಕು’ ಎಂದರು.
ಮಲ್ಲು ಬಾದ್ಯಾಪುರ ಮಾತನಾಡಿ, ‘ಮಕ್ಕಳು ಸೋಮಾರಿಗಳಾಗದೆ ಸತತ ಪರಿಶ್ರಮದಿಂದ ಸಾಧನೆ ಮಾಡಿ ಸ್ವಅರಿವು ಸಹಾನುಭೂತಿ, ಸೃಜನಾತ್ಮಕ ಚಿಂತನೆಗೆ ಒರೆ ಹಚ್ಚಿಕೊಳ್ಳಬೇಕು’ ಎಂದರು.
ಕಾರ್ಯಾಗಾರದಲ್ಲಿ ಚಿತ್ರಕಲೆ, ಕರಕುಶಲ, ಯೋಗ, ಕಲೆ, ಕಥೆ, ಕವನ, ಪ್ರಬಂಧ ರಚನೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಸಂಗೀತ ಯಕ್ಷಗಾನ, ಜನಪದ ನೃತ್ಯ, ವಾದ್ಯ ಸಂಗೀತ, ಸುಗಮ ಸಂಗೀತ, ಏಕಪಾತ್ರಾಭಿನಯ, ಮಿಮಿಕ್ರಿ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.