ಕಮಲನಗರ: ‘ಬಿಜೆಪಿ ನಾಯಕರನ್ನು ಹುಟ್ಟುಹಾಕುವ ಸಾಮರ್ಥ್ಯ ಹೊಂದಿರುವ ಪಕ್ಷ’ ಎಂದು ಪಶುಸಂಗೋಪನೆ ಸಚಿವ ಪ್ರಭು ಚವಾಣ್ ಅಭಿಪ್ರಾಯಪಟ್ಟರು.
ಘಮಸುಬಾಯಿ ತಾಂಡಾದಲ್ಲಿ ನಡೆದ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿಯಲ್ಲಿರುವ ಅನೇಕ ನಾಯಕರು ರಾಜಕೀಯ ಭವಿಷ್ಯ ಕಂಡುಕೊಂಡು, ಅಧಿಕಾರ ಪಡೆದುಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ನಾನು ಬಿಜೆಪಿ ಗರಡಿಯಲ್ಲಿ ಪಳಗಿ ಬಂದಿದ್ದೇನೆ. ನನ್ನ ಕೊನೆ ಉಸಿರಿರವರೆಗೂ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಮಲನಗರ ಮತ್ತು ಔರಾದ್ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ. ವಿರೋಧ ಪಕ್ಷದ ಸರ್ಕಾರ ಇದ್ದಾಗಲೂ ಹೋರಾಟ ಮಾಡಿ, ಕ್ಷೇತ್ರಕ್ಕೆ ಅನುದಾನ ತಂದಿದ್ದೇನೆ. ರಾಜ್ಯದಲ್ಲಿ ಈಗ ನಮ್ಮ ಪಕ್ಷ ಆಡಳಿತದಲ್ಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಭರವಸೆ ಇದೆ ಎಂದು ಹೇಳಿದರು.
ಔರಾದ್ ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಅವರಿಗೆ ಶುಭ ಹಾರೈಸಿದರು.
ಶಿವಕುಮಾರ ಸಜ್ಜನಶೆಟ್ಟಿ, ವಿಕ್ರಮ ದೇಶಮುಖ, ಸುನೀಲಕುಮಾರ ದೇಶಮುಖ, ಜಗನ್ನಾಥ ಜಿರ್ಗೆ, ವಸಂತ ದೇಸಾಯಿ, ಶಿವಕುಮಾರ, ಜೈಪಾಲ್, ಸಚೀನ್ ರಾಠೋಡ, ಗಿರೀಶ ಒಡೆಯರ್ ಹಾಗೂ ಸತೀಶ ಜಿರ್ಗೆ ಇದ್ದರು.