ಬೀದರ್: ಜಿಲ್ಲೆಯಲ್ಲಿ ಒಂದು ವಾರದಿಂದ ವಿಪರೀತ ಚಳಿ ಮುಂದುವರಿದೆ. ಯೇಸುವಿನ ಶ್ರದ್ಧಾ ಭಕ್ತಿಯ ಎದುರು ಭಕ್ತರಿಗೆ ಚಳಿ ಲೆಕ್ಕಕ್ಕೆ ಬಾರದಿದ್ದರೂ ಹಬ್ಬದ ಸಂಭ್ರಮಕ್ಕೆ ಕೋವಿಡ್ ತೊಡಕಾಗಿದೆ. ಕ್ರೈಸ್ತರು ರಾತ್ರಿ 9 ಗಂಟೆಯ ವೇಳೆಗೆ ಧಾರ್ಮಿಕ ಕಾರ್ಯಗಳನ್ನು ಮುಗಿಸಿಕೊಂಡು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ.
ನಗರದ ಮಂಗಲಪೇಟೆಯ ಸೇಂಟ್ ಪೌಲ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ಸಭಾಂಗಣದಲ್ಲಿ ಯುವಕರ ತಂಡ ಬಂಟಿಂಗ್ ಅಳವಡಿಸಿ ಎರಡು ದಿನಗಳಿಂದ ಅಲಂಕಾರ ಮಾಡುತ್ತಿದೆ. ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಿ ವಿಶೇಷ ಪ್ರಾರ್ಥನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲಿ ನೂರಾರು ಕುರ್ಚಿಗಳನ್ನು ಹಾಕಲಾಗಿದೆ. ಕ್ರಿಸ್ಮಸ್ ಆಚರಣೆಗೆ ಚರ್ಚ್ನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಔರಾದ್ ರಸ್ತೆಯಲ್ಲಿರುವ ನಾವದಗೇರಿಯಲ್ಲಿ ರಸ್ತೆ ವಿಭಜಕಗಳ ಮಧ್ಯೆ ಯೇಸುವಿನ ಭಾವಚಿತ್ರ ಹಾಗೂ ಸಾಂತಾ ಕ್ಲಾಸ್ ಕಟೌಟ್ಗಳನ್ನು ಅಳವಡಿಸಲಾಗಿದೆ. ಚರ್ಚ್ಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಮನೆಗಳ ಮುಂದೆ ಆಕಾಶಬುಟ್ಟಿಗಳನ್ನು ತೂಗು ಹಾಕಲಾಗಿದೆ.
ಕುಂಬಾರವಾಡ, ವಿದ್ಯಾನಗರದ ಚರ್ಚ್, ರೋಸ್ ಮೆಮೊರಿಯಲ್ ಚರ್ಚ್, ಶಹಾಪೂರ ಗೇಟ್ ಬಳಿಯ ರೋಮನ್ ಕೆಥೋಲಿಕ್ ಚರ್ಚ್, ಬೀದರ್ ತಾಲ್ಲೂಕಿನ ಮಿರ್ಜಾಪುರದ ಗುಹೆಯಲ್ಲಿರುವ ಚರ್ಚ್, ಆಣದೂರಿನ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆಗೆ ಸಿದ್ಧತೆ ಪೂರ್ಣಗೊಂಡಿದೆ.
ನಗರದ ಚರ್ಚ್ಗಳ ಆವರಣ ಹಾಗೂ ಕ್ರೈಸ್ತರ ಮನೆಗಳ ಮುಂದೆ ಗೋದಲಿ ನಿರ್ಮಿಸಲಾಗಿದೆ. ಬಾಲಯೇಸು, ಮೇರಿ, ಜೋಸೆಫ್ ಹಾಗೂ ಕುರಿಗಳ ಗೊಂಬೆಗಳನ್ನು ಇಟ್ಟು ಗೋದಲಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಚಿಯಾನ್ ಕಾಲೊನಿಯ ಚಿಯೊನ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್ ಹಾಗೂ ಶಹಾಪುರ ಗೇಟ್ ಸಮೀಪದ ಸೇಂಟ್ ಜೋಸೆಫ್ ಚರ್ಚ್ನಲ್ಲಿ ಗುರುವಾರ ಕ್ರೈಸ್ತರು ಗೋದಲಿ ಹಾಡುಗಳನ್ನು ಹಾಡಿ ಸೃಷ್ಟಿಕೃರ್ತನನ್ನು ಸ್ಮರಿಸಿದರು.