ಬಸವಕಲ್ಯಾಣ: ‘ಇಲ್ಲಿ ₹ 600 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಅನುಭವ ಮಂಟಪದ ರೂಪುರೇಷೆ ಸಿದ್ದಪಡಿಸುವ ಕಾರ್ಯ ನಡೆದಿದ್ದು ಎರಡು ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದ ವರ್ಷಾ ಸಭಾಂಗಣದಲ್ಲಿ ಉಪ ಚುನಾವಣೆ ಅಂಗವಾಗಿ ಸೋಮವಾರ ಆಯೋಜಿಸಿದ್ದ ಗಣ್ಯರ, ವ್ಯಾಪಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಅವರಿಂದ ಅನುಭವ ಮಂಟಪ ಉದ್ಘಾಟಿಸಲಾಗುತ್ತದೆ. ಇದಲ್ಲದೆ ನಗರದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಗ್ರಾಮೀಣ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತದೆ ಎಂದೂ ಹೇಳಿದರು.
ಪಕ್ಷದ ಮುಖಂಡರು ಮೈಮರೆತರೆ ಸರಿಯಲ್ಲ. ಚುನಾವಣೆ ಅಂದರೆ ಚುನಾವಣೆ ಶೇ 80 ರಷ್ಟಾದರೂ ಮತದಾನ ಆಗಬೇಕು. ಬಿಜೆಪಿ ಅಭ್ಯರ್ಥಿ ಶರಣು ಸಲಗರ 30 ಸಾವಿರಕ್ಕಿಂತ ಅಧಿಕ ಮತಗಳಿಂದ ಜಯಗಳಿಸಬೇಕು ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಬಸವಕಲ್ಯಾಣ ಜಿಲ್ಲಾ ಕೇಂದ್ರ ಮಾಡುವುದಕ್ಕೆ ಹಾಗೂ ಇಲ್ಲಿನ ಕೈಗಾರಿಕಾ ಪ್ರದೇಶ ವಿಸ್ತರಿಸುವ ಬಗ್ಗೆಯೂ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ವಿ.ಸೋಮಣ್ಣ, ಪ್ರಭು ಚವಾಣ್, ಸಂಸದ ಭಗವಂತ ಖೂಬಾ, ಅಭ್ಯರ್ಥಿ ಶರಣು ಸಲಗರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ವಕಾರೆ ಇದ್ದರು.